ADVERTISEMENT

ಮಕ್ಕಳ ಸಾವು: ತಲಾ ₹ 1 ಲಕ್ಷ ಪರಿಹಾರ ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:32 IST
Last Updated 11 ಫೆಬ್ರುವರಿ 2018, 19:32 IST

ಮಂಡ್ಯ: ಆರೋಗ್ಯ ಇಲಾಖೆ ಸಿಬ್ಬಂದಿ ಹಾಕಿದ ಲಸಿಕೆಯಿಂದ ತಾಲ್ಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿವೆ ಎನ್ನಲಾದ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಮಕ್ಕಳ ಕುಟುಂಬ ಸದಸ್ಯರಿಗೆ ತಲಾ ₹ 1 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಅಂಗನವಾಡಿ ಕೇಂದ್ರದಲ್ಲಿ ನೀಡಿದ ‘ಪೆಂಟಾವಲೆಂಟ್‌’ ಚುಚ್ಚುಮದ್ದಿನಿಂದಲೇ ಮಕ್ಕಳು ಮೃತಪಟ್ಟಿವೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶನಿವಾರ ರಾತ್ರಿವರೆಗೂ ಇಲ್ಲಿನ ಮಿಮ್ಸ್‌ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಅಮಾನತು ಹಾಗೂ ಕುಟುಂಬ ಸದಸ್ಯರಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿ ಸಿದರು. ಪ್ರತಿಭಟನೆಗೆ ಮಣಿದ ಸರ್ಕಾರ ಶನಿವಾರ ತಡರಾತ್ರಿ ಪರಿಹಾರ ಘೋಷಣೆ ಮಾಡಿದೆ.

ADVERTISEMENT

ಈ ಕುರಿತು ತನಿಖೆ ನಡೆಸಲಾ ಗುವುದು. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಔಷಧಿ ಪೂರೈಸಿದ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ತಿಳಿಸಿದ್ದಾರೆ. ಕೃಷ್ಣಪ್ಪ ವೈಯಕ್ತಿಕವಾಗಿ ತಲಾ ₹ 50 ಸಾವಿರ, ಜೆಡಿಎಸ್‌ ಪಕ್ಷದಿಂದ ತಲಾ ₹50 ಸಾವಿರ, ಜೆಡಿಎಸ್‌ ಮುಖಂಡ ಡಾ.ಎಚ್‌.ಕೃಷ್ಣ ವೈಯಕ್ತಿಕವಾಗಿ ತಲಾ ₹ 50 ಸಾವಿರ, ಮುಡಾ ಅಧ್ಯಕ್ಷ ಮುನಾವರ್‌ ಖಾನ್‌ ತಲಾ ₹ 50 ಸಾವಿರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ: ಗುರುವಾರ ರಾತ್ರಿ ಅಂತ್ಯಸಂಸ್ಕಾರ ಮಾಡಲಾಗಿದ್ದ ಭುವನ್‌ ಶವವನ್ನು ಹೊರತೆಗೆದು ಭಾನುವಾರ ಗ್ರಾಮದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶುಕ್ರವಾರ ಮೃತಪಟ್ಟಿದ್ದ ಪ್ರೀತಂ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ‘ಲಸಿಕೆ ಹಾಕಿದ್ದ ಎಲ್ಲ ಮಕ್ಕಳನ್ನೂ ಜಿಲ್ಲಾಸ್ಪತ್ರೆಗೆ ಕರೆಸಿ ನಿಗಾ ವಹಿಸಲಾಗಿತ್ತು. ಈಗ ಎಲ್ಲರೂ ಆರೋಗ್ಯವಾಗಿದ್ದು ಮನೆಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ.ಕೆ.ಮೋಹನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.