ಮೈಸೂರು: ಹೈದರಾಬಾದ್ನಲ್ಲಿ ಸೋಮವಾರ ಆಯೋಜಿಸಿದ್ದ ನಾಸ್ಕಾಂ ಇಂಡಿಯಾ ನಾಯಕತ್ವ ವೇದಿಕೆ ಹಾಗೂ ಜಾಗತಿಕ ಮಾಹಿತಿ ತಂತ್ರಜ್ಞಾನ ಕಾಂಗ್ರೆಸ್ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಗಾಲ್ಫ್ ಕ್ಲಬ್ ಬಳಿಯ ರ್ಯಾಡಿಸನ್ ಬ್ಲ್ಯೂ ಹೋಟೆಲ್ನಲ್ಲಿ ತಂಗಿದ್ದ ಅವರು ಬೆಳಿಗ್ಗೆ 9.30ರ ಸುಮಾರಿಗೆ ಹೈದರಾಬಾದ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಸೇರಿದ್ದ ನಿಯೋಗ ಉದ್ದೇಶಿಸಿ 20 ನಿಮಿಷ ಮಾತನಾಡಿದರು. ‘ಡಿಜಿಟಲ್ ಆವಿಷ್ಕಾರದಲ್ಲಿ ಭಾರತ ಶಕ್ತಿಯುತ ಕೇಂದ್ರವಾಗಿ, ತಂತ್ರಜ್ಞಾನ ಸ್ನೇಹಿ ದೇಶವಾಗಿ ಬೆಳೆದಿದೆ. ನವೋದ್ಯಮಿಗಳು ಹೆಚ್ಚುತ್ತಿರುವುದು ಮಾತ್ರವಲ್ಲದೆ ತಂತ್ರಜ್ಞಾನ ಆವಿಷ್ಕಾರದ ಉದ್ಯಮವೂ ವಿಸ್ತರಿಸುತ್ತಿದೆ. ದೇಶದಾದ್ಯಂತ ಮೂಲಸೌಕರ್ಯದ ಮೂಲಕ ಡಿಜಿಟಲ್ ಸಬಲೀಕರಣ ಸಾಧಿಸಿ, ಸೇವೆಗೆ ಒತ್ತು ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಡಿಜಿಟಲ್ ಇಂಡಿಯಾ ಸರ್ಕಾರದ ಯೋಜನೆ ಮಾತ್ರವಲ್ಲ; ಜನರ ಬದುಕಿನ ಭಾಗವಾಗಿದೆ. ಬ್ಯಾಂಕಿಂಗ್ ವಹಿವಾಟಿಗೆ ನೆರವಾಗಿದೆ. ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ಸಹಾಯವಾಗಿದೆ. ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಸಾಕ್ಷರತೆಗಾಗಿ ಯೋಜನೆ ರೂಪಿಸಲಾಗಿದೆ. ತಂತ್ರಜ್ಞಾನದ ನೆರವಿನಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯ’ ಎಂದು ನುಡಿದರು.
‘ಭಾರತದಲ್ಲಿ ಮೊದಲ ಬಾರಿ ನಡೆಯುತ್ತಿರುವ ಸಮಾವೇಶ ಉದ್ಘಾಟಿಸಲು ಖುಷಿಯಾಗುತ್ತಿದೆ. ನಾನು ಬೇರೆ ಕಡೆ ಇದ್ದರೂ ಮಾಹಿತಿ ತಂತ್ರಜ್ಞಾನದ ಶಕ್ತಿ ನಿಮ್ಮೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.