ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟ ವಲಯದ ಸೋಮನಾಥಪುರ ಬೀಟ್ನಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಹುಲಿ ಮತ್ತು ಆನೆ ಸಾವಿನ ಕಾರಣ ಇನ್ನೂ ನಿಗೂಢವಾಗಿ ಉಳಿದಿದೆ.
ಮೃತ ಪ್ರಾಣಿಗಳ ಅಂಗಾಂಗಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಜಿಕೆವಿಕೆ ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ ಹಾಗೂ ಕೊಯಮತ್ತೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಬೆಂಗಳೂರಿನ ಎರಡೂ ಕೇಂದ್ರಗಳಿಂದ ವರದಿ ಬಂದಿದ್ದು, ವಿಷಪ್ರಾಶನ ನಡೆದಿಲ್ಲ ಎಂದು ತಿಳಿಸಲಾಗಿದೆ. ಕೊಯಮತ್ತೂರು ಪ್ರಯೋಗಾಲಯದಿಂದ ಇನ್ನೂ ವರದಿ ಬಂದಿಲ್ಲ.
‘ಎರಡು ಹುಲಿ ಮತ್ತು ಆನೆ ಒಂದೇ ಸ್ಥಳದಲ್ಲಿ ಮೃತಪಟ್ಟಿರುವುದು ಅಪರೂಪದ ಪ್ರಕರಣವಾಗಿದ್ದು, ವಿಷಪ್ರಾಶನದ ಶಂಕೆ ವ್ಯಕ್ತವಾಗಿತ್ತು. ಆದರೆ, ಮೂರೂ ಪ್ರಾಣಿಗಳ ದೇಹಗಳಲ್ಲಿ ವಿಷದ ಅಂಶ ಪತ್ತೆಯಾಗಿಲ್ಲ. ಇದರಿಂದ ಪ್ರಕರಣ ಮತ್ತಷ್ಟು ಗೊಂದಲ ಹುಟ್ಟಿಸುತ್ತಿದೆ’ ಎಂದು ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇದು ಬೇಟೆಗಾರರ ಕೃತ್ಯವಲ್ಲ. ಹುಲಿಗಳು ಕಾದಾಟದಿಂದ ಸತ್ತಿವೆ ಎಂಬ ತೀರ್ಮಾನಕ್ಕೆ ಬರಲು ಸಹ ಸಾಧ್ಯವಿಲ್ಲ. ಆ ಪ್ರದೇಶದ ಸುತ್ತಮುತ್ತ ತೀವ್ರ ಪರಿಶೀಲನೆ ನಡೆಸಲಾಗಿದ್ದು, ರೈತರನ್ನು ವಿಚಾರಣೆ ಮಾಡಲಾಗಿದೆ. ಯಾವುದೇ ಸುಳಿವು ದೊರಕಿಲ್ಲ. ಕೊಯಮತ್ತೂರು ಪ್ರಯೋಗಾಲಯದ ವರದಿಗೆ ಕಾಯುತ್ತಿದ್ದೇವೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.