ಹೊಸಪೇಟೆ: ತಾಲ್ಲೂಕಿನ ಗರಗ ಗ್ರಾಮದಲ್ಲಿ ಮಂಗಳವಾರ ಸಂಜೆ ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ತೇರು ನೆಲಕ್ಕೆ ಉರುಳಿ ಬಿದ್ದಿದೆ.
‘ದೇಗುಲದಿಂದ ಪಾದಗಟ್ಟೆಗೆ ಹೋಗಿ ತೇರು ವಾಪಸ್ ಬರುತ್ತಿತ್ತು. ಮೂಲ ಸ್ಥಾನದಿಂದ ಸುಮಾರು ಹತ್ತು ಅಡಿ ದೂರದಲ್ಲಿದ್ದಾಗ ತೇರಿನ ಮುಂದಿನ ಗಾಲಿಗಳ ಅಚ್ಚು ಮುರಿದು ಉರುಳಿ ಬಿದ್ದಿದೆ. ತೇರಿನ ಒಳಭಾಗದಲ್ಲಿ ಆರು ಜನ ಕುಳಿತಿದ್ದರು. ಅದರಲ್ಲಿ ಗ್ರಾಮದ ವಿರೂಪಾಕ್ಷ (17) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದನ್ನು ಹೊರತುಪಡಿಸಿದರೆ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ತೇರು ನಿಧಾನವಾಗಿ ಉರುಳಿ ಬಿದ್ದದ್ದರಿಂದ ಜನ ದೂರ ಓಡಿ ಹೋಗಿದ್ದಾರೆ’ ಎಂದು ತಹಶೀಲ್ದಾರ್ ಎಚ್. ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಘಟನೆ ಜರುಗಿದಾಗ ಸಂಜೆ 6.50 ಆಗಿತ್ತು. ರಥೋತ್ಸವದಲ್ಲಿ ಸುಮಾರು ಮೂರು ಸಾವಿರ ಜನ ಪಾಲ್ಗೊಂಡಿದ್ದರು. 60 ವರ್ಷಗಳಿಂದ ರಥೋತ್ಸವ ನಡೆಯುತ್ತಿದೆ. ಈ ರೀತಿ ಆಗಿರುವುದು ಇದೇ ಮೊದಲು’ ಎಂದು ಅವರು ಹೇಳಿದರು. ಕಳೆದ ವರ್ಷ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಇದೇ ರೀತಿ ತೇರು ಉರುಳಿ ಬಿದ್ದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.