ಹೊನ್ನಾವರ (ಕಾರವಾರ): ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಪರೇಶ ಮೇಸ್ತ ಪೋಷಕರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ಭೇಟಿ ಮಾಡಿದರು.
ಹೊನ್ನಾವರದ ತುಳಸಿನಗರದಲ್ಲಿರುವ ಮೇಸ್ತ ಮನೆಗೆ ಆಗಮಿಸಿದ ಅಮಿತ್ ಶಾ ಅವರು ಪರೇಶನ ತಂದೆ ಕಮಲಾಕರ್ ಮೇಸ್ತ ಅವರ ಜತೆ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಇದೇವೇಳೆ, ಪುತ್ರನ ಸಾವಿನ ಪ್ರಕರಣವನ್ನು ಸಿಬಿಐ ಬದಲಿಗೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, 'ಎನ್ಐಎ ತನಿಖೆಯ ಅಗತ್ಯವಿಲ್ಲ. ಬದಲಾಗಿ ಸಿಬಿಐನ ಎಸ್ಪಿ ಶ್ರೇಣಿಯ ಅಧಿಕಾರಿಯಿಂದ ತನಿಖೆ ಮಾಡಿಸಲಾಗುವುದು. ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪರೇಶನ ಸಹೋದರ ಅಥವಾ ಸಹೋದರಿಗೆ ನೌಕರಿ ಕೊಡುವ ಬಗ್ಗೆ ಪ್ರತಿಕ್ರಿಯಿಸಲಿಲ್ಲ' ಎಂದು ಕಮಲಾಕರ್ ಮೇಸ್ತ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಪ್ರವಾಸ ಮೊಟಕು:
ಜ್ವರದಿಂದ ಬಳಲುತ್ತಿರುವ ಅಮಿತ್ ಶಾ, ಹೊನ್ನಾವರದಿಂದ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಕುಮಟಾದಲ್ಲಿ ಆಯೋಜನೆಯಾಗಿದ್ದ ನವಶಕ್ತಿ ಸಮಾವೇಶ ಮತ್ತು ಗೋಕರ್ಣ ದೇವಸ್ಥಾನ ಭೇಟಿಯನ್ನು ರದ್ದು ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಮಟ್ಟದ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.