ADVERTISEMENT

ಕರ್ನಾಟಕದಲ್ಲಿನ್ನೂ ಸಾಲ ಮನ್ನಾ ಆಗಿಲ್ಲ: ರಾಹುಲ್ ಗಾಂಧಿಗೆ ಬಿಜೆಪಿ ತರಾಟೆ

ಟ್ವೀಟ್, ಪತ್ರಿಕಾ ಪ್ರಕಟಣೆಯಿಂದ ಏನೂ ಆಗಲ್ಲ: ಬಿಜೆಪಿ ಟ್ವೀಟ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 11:18 IST
Last Updated 19 ಡಿಸೆಂಬರ್ 2018, 11:18 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಬೆಂಗಳೂರು:ಆರು ತಿಂಗಳುಗಳು ಕಳೆದರೂ ಕರ್ನಾಟಕದಲ್ಲಿ ಸಾಲ ಮನ್ನಾ ಅನುಷ್ಠಾನಗೊಂಡಿಲ್ಲ. ಕೇವಲ ಟ್ವೀಟ್, ಪತ್ರಿಕಾ ಪ್ರಕಟಣೆಗಳಿಂದ ಸಾಲ ಮನ್ನಾ ಆದಂತಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

‘ಆಲೂಗಡ್ಡೆಯಿಂದ ಚಿನ್ನ ಪಡೆದಂತಲ್ಲ’

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಸಾಲ ಮನ್ನಾ ಆದೇಶಕ್ಕೆ ಸಹಿ ಹಾಕಿದ್ದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ‘ಬಿಜೆಪಿ ಕರ್ನಾಟಕ’, ‘ಆರು ತಿಂಗಳುಗಳು ಕಳೆದರೂ ಕರ್ನಾಟಕದಲ್ಲಿ ಸಾಲ ಮನ್ನಾ ಆಗಿಲ್ಲ. ಅದೇ ರೀತಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದ ರೈತರಿಗೂ ನಿಮ್ಮ ಸುಳ್ಳು ಹೇಳುವ ಕಲೆಗಾರಿಕೆ ಗೊತ್ತಾಗಲಿದೆ.ಟ್ವೀಟ್, ಪತ್ರಿಕಾ ಪ್ರಕಟಣೆಗಳಿಂದ ಸಾಲ ಮನ್ನಾ ಆದಂತಾಗುವುದಿಲ್ಲ. ಸಾಲ ಮನ್ನಾ ಎಂಬುದು ಆಲೂಗಡ್ಡೆಯಿಂದ ಚಿನ್ನ ಪಡೆದಂತಲ್ಲ’ ಎಂದು ಟ್ವೀಟ್ ಮಾಡಿದೆ.

ADVERTISEMENT

‘ಕಾಂಗ್ರೆಸ್ ಪಕ್ಷವು ಅಸ್ಸಾಂ ಮತ್ತು ಗುಜರಾತ್‌ ಮುಖ್ಯಮಂತ್ರಿಗಳನ್ನು ಗಾಢ ನಿದ್ದೆಯಿಂದ ಏಳುವಂತೆ ಮಾಡಿದೆ. ಪ್ರಧಾನಿ ಇನ್ನೂ ನಿದ್ದೆಯಲ್ಲಿದ್ದಾರೆ. ನಾವು ಅವರನ್ನೂ ಶೀಘ್ರ ಎಬ್ಬಿಸಲಿದ್ದೇವೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ರಾಹುಲ್ ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ದೇಶದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಕುಟುಂಬ ಕಳೆದ 60 ವರ್ಷಗಳಲ್ಲಿ ನಿದ್ದೆ ಮಾಡದೇ ಇರುತ್ತಿದ್ದರೆ ರೈತರು ಇಂದು ಸ್ವಾವಲಂಬಿಗಳಾಗುತ್ತಿದ್ದರು. ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ನಿದ್ದೆಯಿಂದ ಎಬ್ಬಿಸದಂತೆ ನಿಮ್ಮನ್ನು ಯಾರು ತಡೆಯುತ್ತಿದ್ದಾರೆ. ನೀವು ಅಸ್ಸಾಂ ಮತ್ತು ಗುಜರಾತ್ ಮುಖ್ಯಮಂತ್ರಿಗಳಿಂದ ಕಲಿಯಬೇಕಿದೆ’ ಎಂದು ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.