ಬೆಂಗಳೂರು: ಕಾಂಗ್ರೆಸ್ ಮುಖಂಡರೂ ಆಗಿರುವ ಧಾರವಾಡದ ಗುತ್ತಿಗೆದಾರ ಯು.ಬಿ. ಶೆಟ್ಟಿ ಮತ್ತು ಅವರ ಅಣ್ಣ ಸೀತಾರಾಮ ಶೆಟ್ಟಿ ಅವರಿಗೆ ಸೇರಿದ ಸ್ಥಳಗಳಲ್ಲಿ ನಡೆಸಿದ ಶೋಧದ ವೇಳೆ ₹ 70 ಕೋಟಿಯಷ್ಟು ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಅಕ್ಟೋಬರ್ 28 ಮತ್ತು 29 ರಂದು ಧಾರವಾಡ, ಹುಬ್ಬಳ್ಳಿ, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಉಪ್ಪುಂದ ಸೇರಿದಂತೆ ರಾಜ್ಯದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಗಳು ದಾಳಿಮಾಡಿ, ಶೋಧ ನಡೆಸಿದ್ದರು. ಯು.ಬಿ. ಶೆಟ್ಟಿ ಸಹೋದರರಿಗೆ ಸೇರಿದ ಮನೆಗಳು, ಕಚೇರಿಗಳು, ಅವರ ಜತೆ ವ್ಯಾವಹಾರಿಕ ನಂಟು ಹೊಂದಿರುವವರಿಗೆ ಸೇರಿದ ಸ್ಥಳಗಳಲ್ಲೂ ಶೋಧ ನಡೆಸಲಾಗಿತ್ತು.
ಶೋಧದ ವೇಳೆ ಹಲವು ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುತ್ತಿಗೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾಮಗ್ರಿಗಳ ಖರೀದಿ, ಸಿಬ್ಬಂದಿ ವೇತನ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಆದಾಯ ಮುಚ್ಚಿಟ್ಟಿರುವುದು ಕಂಡುಬಂದಿದೆ. ಯಾವುದೇ ಸಂದರ್ಭದಲ್ಲೂ ಗುತ್ತಿಗೆ ಅಥವಾ ನಿರ್ಮಾಣ ಕಾಮಗಾರಿಗಳ ಕೆಲಸವನ್ನೇ ನಿರ್ವಹಿಸದವರ ಹೆಸರಿನಲ್ಲಿ ಉಪ ಗುತ್ತಿಗೆದಾರರೆಂದು ದಾಖಲೆ ಸೃಷ್ಟಿಸಿ ತೆರಿಗೆ ವಂಚಿಸಲಾಗಿದೆ. ಅಂತಹವರಲ್ಲಿ ಬಹುತೇಕರು ದಾಳಿಗೊಳಗಾದ ಗುತ್ತಿಗೆದಾರರ ಸಂಬಂಧಿಕರೇ ಆಗಿದ್ದರು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
‘ನಕಲಿ ಬಿಲ್ಗಳನ್ನು ಸೃಷ್ಟಿಸಿ ತೆರಿಗೆ ವಂಚಿಸಿ, ಆದಾಯ ಮುಚ್ಚಿಟ್ಟುಕೊಂಡಿರುವುದಕ್ಕೆ ಸಾಕ್ಷ್ಯಗಳು ಲಭಿಸಿವೆ. ಈ ರೀತಿ ₹ 70 ಕೋಟಿಯಷ್ಟು ಅಘೋಷಿತ ವರಮಾನ ಪತ್ತೆಯಾಗಿದೆ. ಅದನ್ನು ಸದರಿ ಗುತ್ತಿಗೆದಾರರು ಕೂಡ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.