ADVERTISEMENT

8ನೇ ಶೈಕ್ಷಣಿಕ ಮಹಾ ಸಮ್ಮೇಳನ ಆರಂಭ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 18:25 IST
Last Updated 17 ಫೆಬ್ರುವರಿ 2011, 18:25 IST

ಮೈಸೂರು:ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಮೈಸೂರು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಸಂಯುಕ್ತವಾಗಿ ನಗರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 8 ನೇ ಶೈಕ್ಷಣಿಕ ಮಹಾ ಸಮ್ಮೇಳನ ಗುರುವಾರ ಅದ್ದೂರಿಯಾಗಿ ಆರಂಭಗೊಂಡಿತು.

ಸಮ್ಮೇಳನಾಧ್ಯಕ್ಷ ಜಿ.ಎನ್.ಸೀತಾರಾಮಯ್ಯ ಅವರನ್ನು ತೆರೆದ ವಾಹನದಲ್ಲಿ ಅರಮನೆ ಮುಂಭಾಗ ಇರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಸಮ್ಮೇಳನ ನಡೆಯುತ್ತಿರುವ ಜಗನ್ಮೋಹನ ಅರಮನೆಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಮೆರವಣಿಯಲ್ಲಿ ಕಂಸಾಳೆ, ಬೀಸು ಕಂಸಾಳೆ, ಕೀಲು ಗೊಂಬೆಗಳು, ಭೂತಕೋಲ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಪಾಲ್ಗೊಂಡು ಗಮನ ಸೆಳೆದವು.ಜಗನ್ಮೋಹನ ಅರಮನೆಯಲ್ಲಿ ಸಮ್ಮೇಳನಕ್ಕಾಗಿ ರಾಜಾ ರವಿವರ್ಮ ಮಹಾ ಮಂಟಪ, ಪಿ.ಆರ್.ತಿಪ್ಪೇಸ್ವಾಮಿ ಪ್ರಧಾನ ವೇದಿಕೆ, ಎಚ್.ಜಿ.ಬಸವಣ್ಣಾಚಾರ್ ಪ್ರಧಾನ ಮಹಾದ್ವಾರ, ಡಾ.ಎಂ.ಎಸ್.ಪಂಡಿತ್ ಕೇಂದ್ರ ಮಹಾದ್ವಾರವನ್ನು ನಿರ್ಮಿಸಲಾಗಿದ್ದು, ರಾಜ್ಯದ ಮೂಲ ಮೂಲೆಗಳಿಂದ ನೂರಾರು ಮಂದಿ ಚಿತ್ರಕಲಾ ಶಿಕ್ಷಕರು ಆಗಮಿಸಿದ್ದಾರೆ.

ಸಮ್ಮೇಳನದ ಅಂಗವಾಗಿ ಸಭಾಂಗಣದ ಮುಂಭಾಗ ಜಲವರ್ಣ, ತೈಲವರ್ಣ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ಚಿತ್ರಕಲೆ, ಚಿತ್ರಕಲಾ ಶಿಕ್ಷಕರಿಗೆ ಸಂಬಂಧಿಸಿದ  ವಿಚಾರಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.