ಹೊಸಪೇಟೆ: ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ದಿನೇ ದಿನೇ ಏರಿಕೆಯಾಗುತ್ತಿದೆ.
ಭಾನುವಾರ ಜಲಾಶಯದಲ್ಲಿ 11.02 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. 20,061 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಶನಿವಾರ 26,946 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. 24 ಗಂಟೆಗಳಲ್ಲಿ ನೀರಿನ ಒಳಹರಿವು ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ. ಆದರೆ, ಒಂದೂವರೆ ಟಿ.ಎಂ.ಸಿ. ಅಡಿಗೂ ಅಧಿಕ ನೀರು ಹರಿದು ಬಂದಿದೆ. ಕಳೆದ ಆರು ದಿನಗಳಲ್ಲಿ ಅಣೆಕಟ್ಟೆಗೆ ಎಂಟು ಟಿ.ಎಂ.ಸಿ. ಅಡಿಗೂ ಹೆಚ್ಚು ನೀರು ಬಂದಿದೆ.
ಮೊದಲ ವಾರ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೇಜ್ಗೆ ತಲುಪಿತ್ತು. ಸಮರ್ಪಕವಾಗಿ ಮಳೆ ಆಗದೇ ಇರುವುದು, ಜಲಾಶಯಕ್ಕೆ ನೀರು ಬರದ ಕಾರಣ ರೈತರು ಚಿಂತಕ್ರಾಂತರಾಗಿದ್ದರು. ಆದರೆ, ವಾರದಿಂದ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಶಿವಮೊಗ್ಗದ ಗಾಜನೂರು ಸಮೀಪದ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅಲ್ಲಿಂದ ನೀರು ಹೊರಬಿಡುತ್ತಿರುವ ಕಾರಣ ತುಂಗಭದ್ರಾ ಅಣೆಕಟ್ಟೆಗೆ ಜೀವ ಕಳೆ ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.