ADVERTISEMENT

‘ಆಭರಣ’ದ ಅಕ್ರಮ ಕಟ್ಟಡ: ಕ್ರಮಕ್ಕೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 14:35 IST
Last Updated 20 ಅಕ್ಟೋಬರ್ 2025, 14:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಜೆ.ಪಿ ನಗರ ಐದನೇ ಹಂತದಲ್ಲಿರುವ ಆಭರಣ ಟೈಮ್‌ಲೆಸ್‌ ಜ್ಯುವೆಲರ್ಸ್‌ ಮಳಿಗೆಯ ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕಾನೂನು ಬಾಹಿರ ಕಟ್ಟಡ ನಿರ್ಮಾಣದ ಬಗೆಗಿನ ದೂರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್‌ ನಿರ್ದೇಶಿಸಿದೆ.

ಅಕ್ರಮ ಕಟ್ಟಡ ನಿರ್ಮಾಣ ಪ್ರಶ್ನಿಸಿ ಆನೇಕಲ್‌ನ ನಾರಾಯಣ ಸ್ವಾಮಿ ಲೇ ಔಟ್‌ನ ಧನುಷ್‌ ಮತ್ತು ಸಹಕಾರ ನಗರದ ಭರತ್‌ ಕಾಮತ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರಾದ ಎಚ್‌.ಸುನಿಲ್‌ ಕುಮಾರ್ ಮತ್ತು ನವೀದ್‌ ಅಹಮದ್‌ ವಾದ ಆಲಿಸಿದ ನ್ಯಾಯಪೀಠ, ‘ಕಟ್ಟಡದ ಮಾಲೀಕರು ಮತ್ತು ಇತರರಿಗೆ ವಿಚಾರಣೆಗೆ ಅವಕಾಶ ನೀಡಿದ ನಂತರ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿವಾದಿ ಜಿಬಿಎಗೆ ತಾಕೀತು ಮಾಡಿದೆ.

ADVERTISEMENT

ವಿಚಾರಣೆ ವೇಳೆ ಜಿಬಿಎ ಪರ ವಕೀಲ ಕೆ.ಎಸ್‌.ಮಲ್ಲಿಕಾರ್ಜುನ ರೆಡ್ಡಿ ಕಳೆದ ಆಗಸ್ಟ್‌ 20ರಂದು ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿ, ‘ಆಸ್ತಿಯಲ್ಲಿ ಕೆಲವು ಅಕ್ರಮ ನಿರ್ಮಾಣಗಳು ನಡೆದಿರುವುದು ನಿಜ ಎಂಬುದು ಕಂಡುಬಂದಿದೆ’ ಎಂದು ವಿವರಿಸಿ ಕೆಲವು ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದರು.

ಇದನ್ನು ಪರಿಗಣಿಸಿರುವ ನ್ಯಾಯಪೀಠ, ‘ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ವಿವಾದಿತ ಕಟ್ಟಡದ ಜಾಗದಲ್ಲಿ ಯಾವುದಾದರೂ ಅಕ್ರಮ ನಿರ್ಮಾಣ ನಡೆದಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ’ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದು, ‘ಈ ಕುರಿತಂತೆ ಮುಂದಿನ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದನ್ನು ಜಿಬಿಎ ವಿವೇಚನೆಗೆ ಬಿಡಲಾಗಿದೆ’ ಎಂದು ವಿವರಿಸಿದೆ.

ಪ್ರಕರಣವೇನು?: ಜೆ.ಪಿ ನಗರದ ಐದನೇ ಹಂತದ 15ನೇ ತಿರುವಿನಲ್ಲಿ ಇರುವ ಸುಮಾರು 3,500 ಚದರ ಅಡಿ ನೆಲ ಅಂತಸ್ತಿನ ಜಾಗವನ್ನು, ಅದರ ಮಾಲೀಕ ಭರತ್‌ ಕಾಮತ್‌ ತಮ್ಮ ಸಂಬಂಧಿಯೂ ಆದ ಪ್ರತಾಪ್‌ ಕಾಮತ್‌ ಅವರಿಗೆ 2021ರಲ್ಲಿ 21 ವರ್ಷಗಳ ಅವಧಿಗೆ ಕರಾರಿನ ಅಡಿಯಲ್ಲಿ ಗುತ್ತಿಗೆ ನೀಡಿದ್ದರು.

‘ಈ ಜಾಗದಲ್ಲಿ ನನ್ನ ಮತ್ತು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಪ್ರತಾಪ್‌ ಕಾಮತ್‌ ಅವರು ಕಾನೂನು ಬಾಹಿರವಾಗಿ ನೆಲ ಅಂತಸ್ತು ಹೊರತುಪಡಿಸಿ ಮೊದಲ ಮತ್ತು ಎರಡನೇ ಅಂತಸ್ತನ್ನು ನಿರ್ಮಾಣ ಮಾಡಿದ್ದಾರೆ. ಆರಂಭದಲ್ಲೇ ಬಿಜಿಎಗೆ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದ್ದರು.

ನಂತರ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಏಕಸದಸ್ಯ ನ್ಯಾಯಪೀಠ, ಸ್ಥಳದ ಮಹಜರು ವರದಿ ಕೇಳಿತ್ತು. ಇದರ ಅನುಸಾರ ಜಿಬಿಎ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಇದನ್ನು ಉಲ್ಲೇಖಿಸಿದ್ದ ಅರ್ಜಿದಾರರು, ‘ಹೈಕೋರ್ಟ್‌ ನಿರ್ದೇಶನದ ಅನುಸಾರ ಈ ಜಾಗದ ಮಹಜರು ನಡೆಸಲಾಗಿದ್ದು ಸ್ಥಳದಲ್ಲಿ ಶೇ 100ರಷ್ಟು ಅತಿಕ್ರಮ ಇರುವುದು ಕಂಡು ಬಂದಿದೆ. ಸದ್ಯ ಈ ಕಟ್ಟಡದಲ್ಲಿ ಆಭರಣ ಜ್ಯುವೆಲರ್ಸ್‌ ಮಳಿಗೆಯನ್ನು ಆರಂಭಿಸಲಾಗಿದೆ’ ಎಂದು ವಿವರಿಸಿದ್ದರು. ಧನುಷ್‌ ಮತ್ತು ಭರತ್‌ ಕಾಮತ್‌ ಸಲ್ಲಿಸಿದ್ದ ಈ ರಿಟ್‌ ಅರ್ಜಿಯನ್ನು ನ್ಯಾಯಪೀಠ ವಿಲೇವಾರಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.