ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿಗೆ ಒಳಗಾಗಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಮಂಗಳವಾರ ಎಸಿಬಿ ಅಧಿಕಾರಿಗಳ ಮುಂದೆ ಹಾಜರಾದರು.
ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದ ಸ್ವಾಮಿ, ಸೋಮವಾರ ಮನೆಗೆ ಹಿಂತಿರುಗಿದ್ದರು. ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಬುಧವಾರವೂ ಅವರ ವಿಚಾರಣೆ ಮುಂದುವರಿಯಲಿದೆ.
ಬಿಡಿಎ ಎಂಜಿನಿಯರ್ ಆಫೀಸರ್ ಎನ್.ಜಿ. ಗೌಡಯ್ಯ ಅವರ ವಿಚಾರಣೆಯೂ ಮುಂದುವರಿದಿದ್ದು, ಸೋಮವಾರ ಈ ಪ್ರಕರಣಕ್ಕೆ ಸಂಬಂಧಿಸಿದ ಉಳಿದವರನ್ನು ಪ್ರಶ್ನಿಸುವುದಾಗಿ ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಇಬ್ಬರೂ ಅಧಿಕಾರಿಗಳನ್ನು ಕಳೆದ ವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸ್ವಾಮಿ ಮತ್ತು ಗೌಡಯ್ಯ ಅವರ ಒಟ್ಟು ಸಂಬಳ–ಖರ್ಚು ಲೆಕ್ಕಹಾಕಿದರೆ ತಲಾ 2 ಕೋಟಿ ಮೊತ್ತದ ಆಸ್ತಿ ಅವರ ಬಳಿ ಇರಬೇಕಿತ್ತು. ಕ್ರಮವಾಗಿ 11 ಹಾಗೂ 13 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಮೇಲ್ನೋಟಕ್ಕೆ ಕಾಣುವಂತಿದೆ ಎಂದು ಎಸಿಬಿ ಈಚೆಗೆ ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ವಿವರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.