ADVERTISEMENT

2016ರಲ್ಲಿ ಅಸ್ತಿತ್ವಕ್ಕೆ ಬಂದ ಎಸಿಬಿ 6 ವರ್ಷದಲ್ಲಿ ಮಾಡಿದ್ದೇನು? ಇಲ್ಲಿದೆ ವಿವರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 7:47 IST
Last Updated 12 ಆಗಸ್ಟ್ 2022, 7:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಖ್ಯಮಂತ್ರಿಯಾಗಿದ್ದವರನ್ನೇ ಜೈಲಿಗೆ ಕಳುಹಿಸುವ ಸಾಮರ್ಥ್ಯ ಹೊಂದಿದ್ದ ಲೋಕಾಯುಕ್ತವನ್ನು ದುರ್ಬಲಗೊಳಿಸಲು ಎಸಿಬಿ ರಚಿಸಲಾಗಿತ್ತು ಎಂಬ ಆರೋಪಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗುರಿಯಾಗಿತ್ತು.

‘ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲೇ ಎಸಿಬಿ ರದ್ದುಗೊಳಿಸಿ, ಲೋಕಾಯುಕ್ತ ಬಲಪಡಿಸುತ್ತೇವೆ’ ಎಂದು ಬಿಜೆಪಿ ಮತ್ತು ಜೆಡಿಎಸ್‌ ನಾಯಕರು 2018ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು.

ಎರಡೂ ಪಕ್ಷಗಳು ಅದನ್ನು ಮಾಡಲಿಲ್ಲ. ಆದರೆ, ಹೈಕೋರ್ಟ್‌ ಈಗ ಎಸಿಬಿಯನ್ನು ರದ್ದುಪಡಿಸಿದೆ.

ADVERTISEMENT

ಎಸಿಬಿ ಸ್ಥಾಪಿಸಿದಾಗ, ಲೋಕಾಯುಕ್ತಕ್ಕೆ ಇದ್ದ ಪೊಲೀಸ್ ಬಲವನ್ನು ಕಿತ್ತುಕೊಂಡು ಅದನ್ನು ಎಸಿಬಿಗೆ ವರ್ಗಾಯಿಸಲಾಗಿತ್ತು. ಅಲ್ಲದೇ, ಯಾವುದೇ ಪ್ರಕರಣದಲ್ಲಿ ದಾಳಿ, ಶೋಧ ನಡೆಬೇಕಾದರೆ ಮುಖ್ಯಕಾರ್ಯದರ್ಶಿ ನೇತೃತ್ವದ ಉನ್ನತ ಸಮಿತಿಯ ಪೂರ್ವಾನುಮತಿಯನ್ನೂ ಪಡೆಯಬೇಕಾಗಿತ್ತು. ಹೀಗಾಗಿ, ಸರ್ಕಾರದ ಆಣತಿಯಂತೆ ಎಸಿಬಿ ನಡೆಯುತ್ತಿದೆ ಎಂಬ ಆಪಾದನೆಯೂ ತನಿಖಾ ಸಂಸ್ಥೆಯ ಮೇಲೆ ಇತ್ತು.

2016 ಮಾರ್ಚ್‌ 19ರಂದು ಎಸಿಬಿ ಅಸ್ತಿತ್ವಕ್ಕೆ ಬಂದಿದ್ದು, ಈವರೆಗೆ 350ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದೆ. 105 ಪ್ರಕರಣಗಳಲ್ಲಿ ‘ಬಿ’ ವರದಿಯನ್ನೂ ಎಸಿಬಿ ಸಲ್ಲಿಸಿದೆ.

ನೋಟಿನ ಚೀಲವನ್ನು ಕಿಟಕಿಯಿಂದ ಆಚೆಗೆ ಎಸೆದಿದ್ದ ಕೆಎಐಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಆಗಿದ್ದ ಟಿ.ಆರ್‌.ಸ್ವಾಮಿ, ಪೈಪ್‌ನಲ್ಲಿ ಹಣ ಬಚ್ಚಿಟ್ಟಿದ್ದ ಲೋಕೋಪಯೋಗಿ ಇಲಾಖೆಕಲಬುರಗಿಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ ಶಾಂತಗೌಡ ಬಿರಾದಾರ್, ಬಿಡಿಎ ಎಂಜಿನಿಯರ್‌ ಎನ್‌.ಜಿ. ಗೌಡಯ್ಯ ವಿರುದ್ಧದ ದಾಳಿಗಳು ಗಮನ ಸೆಳೆದಿದ್ದವು.

ಶಾಸಕ ಜಮೀರ್ ಅಹಮದ್ ವಿರುದ್ಧವೂ ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಎಸಿಬಿ ದಾಳಿ ನಡೆಸಿತ್ತು. ಇತ್ತೀಚೆಗೆ ಜೈಲು ಸೇರಿರುವ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಪ್ರಕರಣದಲ್ಲಿ ಎಸಿಬಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್‌ ಇತ್ತೀಚೆಗೆ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.