ರಾಯಚೂರು: ದುಬೈನ ಮೆಕ್ಕಾ ಬಳಿ ಬಸ್ ಹಾಗೂ ಕಂಟೇನರ್ ಲಾರಿ ಮಂಗಳವಾರ ಮುಖಾಮುಖಿಯಾಗಿದ್ದು, ರಾಯಚೂರಿನಿಂದ ಪವಿತ್ರ ಉಮ್ರಾ ಯಾತ್ರೆಗಾಗಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮಣಕ್ಕೀಡಾಗಿರುವುದು ಬುಧವಾರ ಗೊತ್ತಾಗಿದೆ.
ರಾಯಚೂರಿನ ಆಶಾಪೂರ ಮಾರ್ಗದ ದ್ವಾರಕಾನಗರ ನಿವಾಸಿಗಳಾದ ಶಫಿ ಸೌಲದ್ (53), ಸಿರಾಜ್ ಬೇಗಂ (45), ಶಿಫಾ (20), ಬೇಬಿ ಜಾನ್ (64) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಶಫಿ ಅವರ ಪತ್ನಿ, ಪುತ್ರಿ ಹಾಗೂ ತಾಯಿ ಮೃತರಾಗಿದ್ದು, ಪುತ್ರ ಸಮೀರ್ ಭಾರಿ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಅಪಘಾತದಲ್ಲಿ ಒಟ್ಟು ಎಂಟು ಜನರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತರಾದವರಲ್ಲಿ ಕಲಬುರ್ಗಿಯ ಒಬ್ಬರು ಮತ್ತು ಯಾದಗಿರಿಯ ಒಬ್ಬರು ಇದ್ದಾರೆ. ಹೆಸರು ಗೊತ್ತಾಗಿಲ್ಲ. ಮೆಕ್ಕಾ ಭೇಟಿ ಮುಗಿಸಿ ಮದೀನಾ ಕಡೆಗೆ ಸಂಚರಿಸುವಾಗ ಈ ಅಪಘಾತ ಸಂಭವಿಸಿದೆ.
ರಾಯಚೂರಿನಿಂದ ಫೆಬ್ರುವರಿ 14 ರಂದು ಒಂದೇ ಕುಟುಂಬದ ಐವರು ದುಬೈಗೆ ತೆರಳಿದ್ದರು. ರಾಯಚೂರಿನ ಪಶ್ಚಿಮ ಠಾಣೆಯ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.