ಬೆಂಗಳೂರು:ರಸ್ತೆ ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನಗೊಂಡ ಸ್ಥಿತಿ ತಲುಪಿರುವ ಯುವಕನಿಗೆ ಹೈಕೋರ್ಟ್ ಒಟ್ಟು ₹ 17.66 ಲಕ್ಷ ಪರಿಹಾರ ನಿಗದಿಪಡಿಸಿದೆ.
ಈ ಕುರಿತಂತೆ ಬಸವರಾಜು ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್. ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಎ.ಆರ್ ಹೆಗಡೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
’ಯುವಕನಿಗೆ ಆಗಿರುವ ವೈಕಲ್ಯವನ್ನು ಯಾವ ರೀತಿಯಲ್ಲೂ ಸರಿಪಡಿಸಲಾಗದು. ಅಪಘಾತದಿಂದಾಗಿ ಆತ ಮದುವೆಯಾದರೂ ಲೈಂಗಿಕ ಸುಖ ಅನುಭವಿಸಲು ಸಾಧ್ಯವಿಲ್ಲ. ಆದ್ದರಿಂದ, ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಗಳು (ಎಂಎಸಿಟಿ) ಅಪಘಾತ ಪ್ರಕರಣಗಳಲ್ಲಿ ಪರಿಹಾರ ನಿಗದಿಪಡಿಸುವಾಗ ಮಾನವೀಯ ಅಂಶಗಳಿಗೆ ಒತ್ತು ನೀಡಬೇಕು‘ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?: 2011ರಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಬಸವರಾಜು ಅವರಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರ ಮರ್ಮಾಂಗಕ್ಕೆ ತೀವ್ರ ಪೆಟ್ಟಾಗಿತ್ತು.
’ಅವವರ ಮರ್ಮಾಂಗ ಕಾಯಂ ವೈಕಲ್ಯಕ್ಕೆ ಒಳಗಾಗಿದೆ. ಹಾಗಾಗಿ ಆತ ಜೀವನದಲ್ಲಿ ಲೈಂಗಿಕ ಸುಖ ಅನುಭವಿಸಲು ಸಾಧ್ಯವಿಲ್ಲ‘ ಎಂದು ವೈದ್ಯರು ಪ್ರಮಾಣಪತ್ರ ನೀಡಿದ್ದರು.
ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಕೇವಲ₹ 50 ಸಾವಿರ ಪರಿಹಾರ ನಿಗದಿಪಡಿಸಿ, ಒಟ್ಟು ₹ 3.73 ಲಕ್ಷ ಪರಿಹಾರ ನೀಡಲು ವಿಮಾ ಕಂಪನಿಗೆ ಆದೇಶಿಸಿತ್ತು. ಅರ್ಜಿದಾರ ಯುವಕ 11.75 ಲಕ್ಷ ಪರಿಹಾರ ಕೇಳಿದ್ದರು. ಆದರೆ, ನ್ಯಾಯಪೀಠ ಅದಕ್ಕೂ ಅಧಿಕ ಮೊತ್ತವನ್ನು ಪರಿಹಾರ ರೂಪದಲ್ಲಿ ನಿಗದಿಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.