ನವದೆಹಲಿ: ಮಾಹಿತಿ ಆಯುಕ್ತ ಎಂ.ಶ್ರೀಧರ ಆಚಾರ್ಯುಲು ಅವರು ಮುಖ್ಯ ಮಾಹಿತಿ ಆಯುಕ್ತ ಆರ್.ಕೆ. ಮಾಥುರ್ ವಿರುದ್ಧ ತಮ್ಮ ನಿವೃತ್ತಿಗೆ ಒಂದು ದಿನ ಮೊದಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬ್ಯಾಂಕುಗಳಿಗೆ ಉದ್ದೇಶಪೂರ್ವಕವಾಗಿ ಸಾಲ ಬಾಕಿ ಉಳಿಸಿಕೊಂಡವರ ಹೆಸರು ಬಹಿರಂಗಪಡಿಸಬೇಕು ಎಂದು ಆರ್ಬಿಐಗೆ ತಾವು ಸೂಚಿಸಿದ್ದಕ್ಕೆ ಮಾಥುರ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಆಚಾರ್ಯುಲು ಅವರು ಮಂಗಳವಾರ ನಿವೃತ್ತರಾದರು. ಮಾಥುರ್ ಅವರಿಗೆ ಆಚಾರ್ಯುಲುಸೋಮವಾರ ಪತ್ರ ಬರೆದಿದ್ದಾರೆ. ಆರ್ಬಿಐಗೆ ತಾವು ಕೊಟ್ಟ ನಿರ್ದೇಶನದ ವಿರುದ್ಧ ಮಾಥುರ್ ಅವರು ನಿಲುವು ತಳೆಯಲು ಕಾರಣವೇನು ಎಂದು ಈ ಪತ್ರದಲ್ಲಿ ಆಚಾರ್ಯುಲು ಪ್ರಶ್ನಿಸಿದ್ದಾರೆ. ಸುಸ್ತಿದಾರರ ಮಾಹಿತಿ ಬಚ್ಚಿಡಲು ಆರ್ಬಿಐಗೆ ಮಾಥುರ್ ನೆರವಾಗುತ್ತಿರುವುದು ಯಾಕೆ ಎಂದೂ ಅವರು ಕೇಳಿದ್ದಾರೆ.
‘ಉದ್ದೇಶಪೂರ್ವಕ ಸುಸ್ತಿದಾರರ ಹೆಸರು ಮುಚ್ಚಿಡಲು ನೆರವಾಗುವುದು ನಮ್ಮ ಕಾನೂನುಬದ್ಧ ಕರ್ತವ್ಯವೇ’ ಎಂದು ಅವರು ಕೇಳಿದ್ದಾರೆ. ಭಾರತ ಮಾತೆಗೆ ದ್ರೋಹ ಎಸಗಿದ ಇಂತಹ ಹಲವು ಡಕಾಯಿತರ ಬಣ್ಣ ಬಯಲಾಗಿಸಬೇಕು ಎಂದು ಅವರು ತಿಳಿಸಿದ್ದಾರೆ.
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ಮಾಹಿತಿ ಆಯೋಗವು (ಸಿವಿಸಿ) ಇತ್ತೀಚೆಗೆ ನೋಟಿಸ್ ನೀಡಿತ್ತು. ಉದ್ದೇಶಪೂರ್ವಕ ಸುಸ್ತಿದಾರರ ಹೆಸರು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಮತ್ತು ಸಿಐಸಿ ನೀಡಿದ್ದ ನಿರ್ದೇಶನವನ್ನು ಯಾಕೆ ಪಾಲಿಸಿಲ್ಲ ಎಂದು ಪ್ರಶ್ನಿಸಿತ್ತು. ಆಚಾರ್ಯುಲು ನೀಡಿದ ಈ ನೋಟಿಸ್ಗೆ ಮಾಥುರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.