ADVERTISEMENT

ನಿವೃತ್ತ ನ್ಯಾಯಮೂರ್ತಿಗಳ ಮರು ನೇಮಕ ಸಲ್ಲ: ಎಎಬಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 15:51 IST
Last Updated 12 ಫೆಬ್ರುವರಿ 2026, 15:51 IST
ಎಎಬಿ ಲಾಂಛನ
ಎಎಬಿ ಲಾಂಛನ   

ಬೆಂಗಳೂರು: ‘ನ್ಯಾಯಾಂಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರದಲ್ಲಿ ನಿವೃತ್ತ ನ್ಯಾಯಮೂರ್ತಿಗಳನ್ನು ಆಶ್ರಯಿಸುವುದರಿಂದ ಹೊಸ ಪೀಳಿಗೆಯ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಲಕ್ವ ಹೊಡೆಯಲಿದೆ’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆತಂಕ ವ್ಯಕ್ತಪಡಿಸಿದೆ.

ಈ ಕುರಿತಂತೆ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ಉಪಾಧ್ಯಕ್ಷ ಸಿ.ಎಸ್‌.ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್‌ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ಕೇಂದ್ರ ಕಾನೂನು ಸಚಿವ ಅರ್ಜುನ ಸಿಂಗ್ ಮೇಘವಾಲ್‌ ಅವರಿಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ.

‘ನಿವೃತ್ತ ನ್ಯಾಯಮೂರ್ತಿಗಳ ಪುನರ್‌ ನೇಮಕಾತಿ ಸಲ್ಲ’ ಎಂದು ‍ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ADVERTISEMENT

ಪತ್ರದಲ್ಲಿ ಏನಿದೆ?:

‘ಸುಪ್ರೀಂ ಕೋರ್ಟ್ ಕೊಲಿಜಿಯಂ ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್‌ನ ಐವರು ನಿವೃತ್ತ ನ್ಯಾಯಮೂರ್ತಿಗಳನ್ನು ಹಂಗಾಮಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು  ಕೇಂದ್ರಕ್ಕೆ ಶಿಫಾರಸುವ ಮಾಡಿರುವ ಹಠಾತ್ ಕ್ರಮ ವಕೀಲ ವೃಂದವನ್ನು ಕಳವಳಕ್ಕೆ ದೂಡಿದೆ.

ನೇಮಕಗೊಂಡಿರುವ ನ್ಯಾಯಮೂರ್ತಿಗಳ ಸಾಮರ್ಥ್ಯದ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ. ಕರ್ನಾಟಕವೂ ಸೇರಿದಂತೆ ದೇಶದ ಇತರೆ ಹೈಕೋರ್ಟ್‌ಗಳ ವಕೀಲರು ಈ ಕ್ರಮವನ್ನು ವಿರೋಧಿಸಿದ್ದರು ಎಂಬುದನ್ನು ಮರೆಯಬಾರದು. ಈ ಪ್ರವೃತ್ತಿ ದೇಶದ ಇತರೆ ಹೈಕೋರ್ಟ್‌ಗಳಿಗೂ ವ್ಯಾಪಿಸಬಾರದು. ಇಂತಹ ನಡೆ ಭವಿಷ್ಯದಲ್ಲಿ ಉತ್ತಮ ನ್ಯಾಯಮೂರ್ತಿಗಳಾಗಿ ಹೊರಹೊಮ್ಮಬಹದಾದ ಸಮರ್ಥ ಮತ್ತು ಪ್ರತಿಭಾನ್ವಿತ ಯುವ ಸಮೂಹಕ್ಕೆ ಆಘಾತ ಉಂಟುಮಾಡಬಲ್ಲದು. 

ಸುಪ್ರೀಂ ಕೋರ್ಟ್ ಕೊಲಿಜಿಯಿಂ ಅಲಹಾಬಾದ್ ಹೈಕೋರ್ಟ್‌ಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕಾತಿ ಶಿಫಾರಸು ನಿರ್ಧಾರವನ್ನು ಕೂಡಲೇ ಮರು ಪರಿಶೀಲಿಸಬೇಕು. ಬಾರ್ (ವಕೀಲ ವೃಂದ) ಮತ್ತು ಬೆಂಚ್ (ನ್ಯಾಯಾಂಗ ಅಧಿಕಾರಿ ವರ್ಗ) ಎರಡರಲ್ಲೂ ಲಭ್ಯವಿರುವ ಕಿರಿಯ ಪ್ರತಿಭಾನ್ವಿತರನ್ನು ಆಯ್ಕೆ ಮಾಡಬೇಕು.

ಕೊಲಿಜಿಯಂ ನಿರ್ಧಾರ: ಇದೇ 3ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಸಭೆ ಸೇರಿತ್ತು. ಈ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಫೈಜ್‌ ಅಲಂ ಖಾನ್‌, ಮೊಹಮ್ಮದ್‌ ಅಸ್ಲಂ, ಸೈಯದ್‌ ಆಫ್ತಾಬ್‌ ಹುಸೇನ್‌ ರಿಝ್ವಿ, ರೇಣು ಅಗರವಾಲ್‌ ಮತ್ತು ಜ್ಯೋತ್ಸ್ನಾ ಶರ್ಮ ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ಎರಡು ವರ್ಷಗಳವರೆಗೆ ಹಂಗಾಮಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಶಿಫಾರಸನ್ನು ಸಂವಿಧಾನದ 224 ಎ ವಿಧಿಯಡಿ ಕೈಗೊಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.