ಬೆಂಗಳೂರು: ಕೋವಿಡ್-19ರ ನಂತರ ಹಣಕಾಸು ವಿಷಯದ ಬಗ್ಗೆ ನಾಗರಿಕರಲ್ಲಿ ಹೆಚ್ಚು ತಿಳಿವಳಿಕೆ ಕಂಡು ಬಂದಿದ್ದು, ಖರ್ಚು
ಗಳನ್ನು ಕಡಿಮೆ ಮಾಡಿ ಉಳಿತಾಯದ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದಾರೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.
‘ಎಸ್ಬಿಐ ಲೈಫ್’ ವಿಮಾ ಸಂಸ್ಥೆಯು ‘ನೀಲ್ಸನ್ಐಕ್ಯು (ಇಂಡಿಯಾ)’ ಸಹಯೋಗದೊಂದಿಗೆ ಮಾಡಿದ ಗ್ರಾಹಕರ ವಾರ್ಷಿಕ ಅಧ್ಯಯನ ಇದಾಗಿದೆ ಎಂದು ‘ಎಸ್ಬಿಐ ಲೈಫ್’ನ ವಲಯ–2ರ ಅಧ್ಯಕ್ಷ ಎವಿಎಸ್ ಶಿವರಾಮ ಕೃಷ್ಣ ವಿವರಿಸಿದ್ದಾರೆ.
‘ಹಣಕಾಸು ಪ್ರತಿರಕ್ಷೆ 2.0’ ಹೆಸರಿನಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದ್ದು, ಕೋವಿಡ್-19ರ ನಂತರ ಹಣಕಾಸು ವಿಷಯದ ಬಗ್ಗೆ ಗ್ರಾಹಕರ ತಿಳಿವಳಿಕೆಯಲ್ಲಿ ಹೆಚ್ಚಳ ಕಂಡು ಬಂದಿದೆ. ವಿಮೆ ವಿಷಯದಲ್ಲಿ ದೇಶದ ಗ್ರಾಹಕರ ಮನೋಭಾವ ಬದಲಾಗುತ್ತಿದೆ. ಶೇ 57ರಷ್ಟು ಭಾರತೀಯರು ಆರ್ಥಿಕ ಭದ್ರತೆ ಮತ್ತು ಕುಟುಂಬ ಸ್ಥಿರತೆ ಕಾಪಾಡಿಕೊಳ್ಳಲು ಹಣಕಾಸು ಪ್ರತಿರಕ್ಷೆ ಹೊಂದಲು ಒಲವು ಹೊಂದಿದ್ದಾರೆ ಎಂಬುದು ಸಮೀಕ್ಷೆಯ ಸಂಶೋಧನೆಗಳು ಸೂಚಿಸುತ್ತವೆ ಎಂದು ವಿವರಿಸಿದ್ದಾರೆ.
ಕೋವಿಡ್ ಪ್ರಾರಂಭವಾದಾಗಿನಿಂದ ದೇಶದ ಗ್ರಾಹಕರ ವೈಯಕ್ತಿಕ ಖರ್ಚು-ವೆಚ್ಚದ ವಿಷಯದಲ್ಲಿ ಬದಲಾವಣೆ ಕಂಡುಬಂದಿದೆ. ಬಳಕೆದಾರರು ಈಗ ಎಚ್ಚರಿಕೆಯ ಧೋರಣೆ ಹೊಂದಿದ್ದಾರೆ ಮತ್ತು ವಿವೇಚನೆಯಿಂದ ಖರ್ಚು ಮಾಡುತ್ತಿದ್ದಾರೆ. ಉಳಿತಾಯ ಮತ್ತು ಹೂಡಿಕೆಗಳನ್ನು ಹೆಚ್ಚಿಸಿದ್ದಾರೆ ಎಂದಿದ್ದಾರೆ.
ಶೇ 65ರಷ್ಟು ಭಾರತೀಯರು ಅನಿವಾರ್ಯವಲ್ಲದ ವಸ್ತುಗಳ ಮೇಲೆ ಕಡಿಮೆ ಖರ್ಚು ಮಾಡಲು ಆರಂಭಿಸಿದ್ದಾರೆ ಮತ್ತು ಆದಾಯದ ಶೇ 50ರಷ್ಟು ಉಳಿತಾಯ ವಿಮೆ, ಹೂಡಿಕೆಗಳಿಗೆ ಮೀಸಲಿಡುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ, ಹಣಕಾಸು ಯೋಜನೆ ಪ್ರಕ್ರಿಯೆಯಲ್ಲಿ ವಿಮೆ ಅತ್ಯಂತ ಮಹತ್ವದ್ದಾಗಿದೆ ಎಂದು ಶೇ 78ರಷ್ಟು ಭಾರತೀಯರು ಭಾವಿಸುತ್ತಾರೆ. ಹೀಗಾಗಿ, ಕುಟುಂಬದ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಈ ಅವಧಿಯಲ್ಲಿ ಜೀವ ವಿಮೆಯನ್ನು ಆಯ್ಕೆ ಮಾಡಿಕೊಳ್ಳುವುದು ಬುದ್ಧಿವಂತ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.