ADVERTISEMENT

ತರಬೇತಿ ನಿರತ ಯುವಕ ಸಾವು; ವಾಯುಪಡೆಯ 6 ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ

ಏಜೆನ್ಸೀಸ್
Published 25 ಸೆಪ್ಟೆಂಬರ್ 2022, 6:47 IST
Last Updated 25 ಸೆಪ್ಟೆಂಬರ್ 2022, 6:47 IST
   

ಬೆಂಗಳೂರು: ತರಬೇತಿ ನಿರತ 27 ವರ್ಷದ ಯುವಕನ ಶವಕಾಲೇಜು ಆವರಣದಲ್ಲಿ ಪತ್ತೆಯಾದ ಬಳಿಕ ವಾಯುಸೇನೆಯ ಆರು ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಲಹಳ್ಳಿಯಲ್ಲಿರುವ ವಾಯು ಸೇನೆ ತಾಂತ್ರಿಕ ಕಾಲೇಜು (ಎಎಫ್‌ಟಿಸಿ) ಆವರಣದಲ್ಲಿ ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಅಂಕಿತ್‌ ಕುಮಾರ್‌ ಝಾ ಎಂದು ಗುರುತಿಸಲಾಗಿದೆ. ನ್ಯಾಯಾಲಯವು ತಮ್ಮ ವಿರುದ್ಧ ತನಿಖೆಗೆ ಆದೇಶಿಸಿದ ನಂತರ ಝಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರದಲ್ಲಿ ವಾಯುಸೇನೆಯ ಕಮಾಂಡರ್‌, ವಿಂಗ್‌ ಕಮಾಂಡರ್‌ ಹಾಗೂ ಗ್ರೂಪ್‌ ಕ್ಯಾಪ್ಟನ್‌ ದರ್ಜೆಯ ಅಧಿಕಾರಿಗಳ ಹೆಸರನ್ನು ಝಾ ಬರೆದಿದ್ದಾರೆ.ಕಾಲೇಜು ಆವರಣದಲ್ಲಿ ತಮ್ಮ ಮಗನಿಗೆ ನಿರಂತರವಾಗಿ ಕಿರುಕುಳ ನೀಡಲಾಗಿದೆ ಎಂದು ಅಂಕಿತ್‌ ಪೋಷಕರು ಆರೋಪಿಸಿದ್ದಾರೆ.

ಝಾ ವಿರುದ್ಧ ಶಿಸ್ತು ಕ್ರಮ ಜರುಗಿಸಿ ತರಬೇತಿಯಿಂದ ತೆಗೆದುಹಾಕಲಾಗಿತ್ತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ಆರೋಪಿಗಳು ತಲೆ ಮರೆಸಿಕೊಂಡಿಲ್ಲ. ಝಾ ಸಹೋದರ ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕುಟುಂಬದವರು ಹಾಗೂಆತ್ಮಹತ್ಯೆ ಪತ್ರದಲ್ಲಿ ಮಾಡಿರುವ ಆರೋಪಗಳ ಅನುಸಾರವಾಗಿ ಸಾಕ್ಷ್ಯ ಸಂಗ್ರಹಿಸುತ್ತಿದ್ದೇವೆ. ಮೃತ ವ್ಯಕ್ತಿಯ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು. ಅದೇ ದಿನ ಅವರನ್ನು ತರಬೇತಿಯಿಂದ ವಜಾಗೊಳಿಸಲಾಗಿತ್ತು. ಶಿಸ್ತು ಕ್ರಮದ ಬಳಿಕ ಝಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕೊಠಡಿಯೊಂದರಲ್ಲಿ ಪತ್ತೆಯಾಗಿದೆ' ಎಂದು ಹಿರಿಯ ಪೊಲೀಸ್‌ ಅಧಿಕಾರಿ ವಿನಾಯಕ್‌ ಪಾಟೀಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.