ಬೆಂಗಳೂರು: ಹೊರ ದೇಶಗಳಲ್ಲಿ ಕೆಲಸದ ಆಮಿಷವೊಡ್ಡಿ ಯುವತಿಯರನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ನಗರ ಪೊಲೀಸರು, ಪ್ರಮುಖ ಆರೋಪಿ ನರಸಿಂಹ ಎಂಬಾತನನ್ನು ಬಂಧಿಸಿದ್ದಾರೆ.
‘ನಗರದ ನಿವಾಸಿಯಾದ ನರಸಿಂಹ, ಇಬ್ಬರು ಯುವತಿಯರನ್ನು ಹೊರದೇಶಕ್ಕೆ ಕಳುಹಿಸಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಜಾಲದ ಬಗ್ಗೆ ಮಾಹಿತಿ ಕೆಲಹಾಕಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಸೆರೆ ಹಿಡಿದಿದ್ದಾರೆ. ಇಬ್ಬರು ಯುವತಿಯರನ್ನೂ ರಕ್ಷಿಸಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಯುವತಿಯರನ್ನು ಸಂಪರ್ಕಿಸುತ್ತಿದ್ದ ಆರೋಪಿ, ವಿದ್ಯಾರ್ಹತೆಗೆ ತಕ್ಕಂತೆ ಹೊರದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳುತ್ತಿದ್ದ. ಆತನ ಮಾತು ನಂಬಿ ಬರುತ್ತಿದ್ದ ಯುವತಿಯರನ್ನು ಶ್ರೀಲಂಕಾಕ್ಕೆ ಕಳುಹಿಸುತ್ತಿದ್ದ.’
‘ಶ್ರೀಲಂಕಾದಲ್ಲಿರುವ ಜಾಲದ ಸದಸ್ಯರು, ಯುವತಿಯರನ್ನು ದುಬೈಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಯುವತಿಯರನ್ನು ಅಕ್ರಮ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿತ್ತು’ ಎಂದು ಅಧಿಕಾರಿ ಮಾಹಿತಿ ನೀಡಿದರು.
‘ಆರೋಪಿ ನರಸಿಂಹ ವಿರುದ್ಧಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳ ಸಾಗಣೆ ಜಾಲದಲ್ಲಿ ನಗರ ಹಾಗೂ ಹೊರ ರಾಜ್ಯದ ಹಲವರು ಭಾಗಿಯಾಗಿರುವ ಮಾಹಿತಿ ಇದ್ದು, ಅವರನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಅಧಿಕಾರಿ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.