ಉಳ್ಳಾಲ: ಇಲ್ಲಿನ ಕುತ್ತಾರು ನಿತ್ಯಾನಂದನಗರದ ಎಂಎಸ್ಐಎಲ್ನ ಮದ್ಯದ ಮಳಿಗೆಗೆ ನುಗ್ಗಿದ ಕಳ್ಳರು, ₹1 ಲಕ್ಷ ಮೌಲ್ಯದ ಮದ್ಯವನ್ನು ಕಳವು ಮಾಡಿದ್ದಾರೆ.
ಷಟರ್ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ತಮ್ಮ ಕೃತ್ಯ ಹೊರಗೆ ಯಾರಿಗೂ ಕಾಣಿಸದಂತೆ ಅಂಗಡಿ ಎದುರು ಬಟ್ಟೆಯನ್ನು ಕಟ್ಟಿ ಬಾಗಿಲನ್ನು ಮುರಿದಿದ್ದಾರೆ. ಸಿಸಿಟಿವಿ ದಾಖಲೆ ಹೊಂದಿರುವ ಡಿವಿಆರ್ ಅನ್ನೂ ಕಳವು ಮಾಡಲಾಗಿದೆ.
ಅಂಗಡಿಯ ಷಟರ್ ತೆರೆಯುವುದನ್ನು ಕಂಡ ಜನರು, ಮಳಿಗೆ ತೆರೆದಿರುವುದಾಗಿ ಭಾವಿಸಿ, ಮದ್ಯ ನೀಡುವಂತೆ ಕೇಳಿಕೊಳ್ಳುತ್ತಿರುವ ದೃಶ್ಯ ಕಂಡುಬಂತು. ದ್ವಿಚಕ್ರ ವಾಹನಗಳಲ್ಲಿ ಕೆಲವರು ಬಂದರೆ, ಇನ್ನು ಕೆಲವರು ಕಾರಿನಲ್ಲಿ ಬಂದು ಮದ್ಯ ಕೇಳಿ ಪೊಲೀಸರಿಂದ ತರಾಟೆಗೆ ಒಳಗಾದರು. ಈ ಮಳಿಗೆಯ ಸಮೀಪದಲ್ಲಿರುವ ಪಾನ್ ಅಂಗಡಿಯಿಂದಲೂ 10 ಪ್ಯಾಕೆಟ್ ಸಿಗರೇಟ್ ಕಳವು ಮಾಡಲಾಗಿದೆ. ಮೂರು ವರ್ಷದಲ್ಲಿ 10 ನೇ ಬಾರಿ ಕಳವು ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.