ADVERTISEMENT

ಸುವರ್ಣ ವಿಧಾನಸೌಧ: ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 16:33 IST
Last Updated 11 ಡಿಸೆಂಬರ್ 2025, 16:33 IST
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ನಿಜಶರಣ ಅಂಬಿಗರ ಚೌಡಯ್ಯ ಅವರ ಚಿತ್ರ ಹಿಡಿದು ಪ್ರತಿಭಟಿಸಿದರು
–ಪ್ರಜಾವಾಣಿ ಚಿತ್ರ: ರಂಜು ಪಿ
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ನಿಜಶರಣ ಅಂಬಿಗರ ಚೌಡಯ್ಯ ಅವರ ಚಿತ್ರ ಹಿಡಿದು ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ: ರಂಜು ಪಿ   

ಸುವರ್ಣ ವಿಧಾನಸೌಧ (ಬೆಳಗಾವಿ): ನಿಜಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆ ಸ್ಥಾಪನೆಗೆ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು. ಪ್ರತಿಮೆ ಸ್ಥಾಪನೆಗೆ ಎಷ್ಟು ಸಮಯ ಬೇಕು ಎಂಬುದನ್ನು ಸರ್ಕಾರವು ಈಗಲೇ ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ತಿನ ಹಲವು ಸದಸ್ಯರು ಒತ್ತಾಯಿಸಿದರು.

ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಗುರುವಾರದ ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು. ‘ನಾಲ್ಕು ಬಾರಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಈವರೆಗೆ ಯಾವುದೇ ಪ್ರಗತಿ ಆಗಿಲ್ಲ. ಪ್ರತಿಮೆ ಸ್ಥಾಪಿಸುವ ಇಚ್ಛೆ ಸರ್ಕಾರಕ್ಕೆ ಇದೆಯೋ ಅಥವಾ ಇಲ್ಲವೋ’ ಎಂದು ಪ್ರಶ್ನಿಸಿದರು.

ಬಿಜೆಪಿಯ ಕೇಶವ ಪ್ರಸಾದ್‌, ‘ಅಂಬಿಗರ ಸಮುದಾಯದ ಬಗ್ಗೆ ತಾತ್ಸಾರವೇ? ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದು ಚುನಾವಣೆಯ ನಂತರ ಸರ್ಕಾರ ಆ ಸಮುದಾಯದ ಕೈಬಿಟ್ಟಿದೆ’ ಎಂದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು, ‘ಪ್ರತಿಮೆ ಸ್ಥಾಪಿಸುತ್ತೇವೆ. ಇಷ್ಟೇ ಅವಧಿಯಲ್ಲಿ ಮಾಡುತ್ತೇವೆ ಎಂದು ಹೇಳಲಾಗದು’ ಎಂದು ಉತ್ತರಿಸಿದರು.

ಆಗ ತಿಪ್ಪಣ್ಣಪ್ಪ ಅವರು ತೀವ್ರ ಆಕ್ರೋಶದಿಂದ, ‘ಸಣ್ಣ ಸಮುದಾಯ ಎಂದು ನಮ್ಮನ್ನು ಕಡೆಗಣಿಸುತ್ತಿದ್ದೀರಿ ಅಲ್ಲವೇ?. ಸರ್ಕಾರ ಇಂದೇ ತೀರ್ಮಾನ ಪ್ರಕಟಿಸಬೇಕು. ನಾಳೆಯೇ ಗುದ್ದಲಿ ಪೂಜೆ ನಡೆಸಬೇಕು’ ಎಂದು ಆಗ್ರಹಿಸಿದರು. ಅಂಬಿಗರ ಚೌಡಯ್ಯ ಅವರ ಭಾವಚಿತ್ರ ಹಿಡಿದು, ಸಭಾಪತಿ ಅವರ ಪೀಠದ ಮುಂದಕ್ಕೆ ಬರಲು ಮುಂದಾದರು. ಈ ವೇಳೆ ಕೆಲ ಸದಸ್ಯರು ಮತ್ತು ಸಚಿವರು ಅವರನ್ನು ಸಮಾಧಾನಪಡಿಸಿ ಕೂರಿಸಿದರು.

ನಂತರ ತಂಗಡಗಿ ಅವರು, ‘ಸೂಕ್ತ ಸ್ಥಳವನ್ನು ಗುರುತಿಸಿ, ಶೀಘ್ರವೇ ಪ್ರತಿಮೆ ಸ್ಥಾಪಿಸುತ್ತೇವೆ. ನಾನೂ ಸಣ್ಣ ಸಮುದಾಯದಿಂದ ಬಂದವನು. ಇನ್ನೊಂದು ಸಣ್ಣ ಸಮುದಾಯದ ಕಡೆಗಣನೆಗೆ ಅವಕಾಶ ನೀಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.