ADVERTISEMENT

ಜಾಲತಾಣಗಳಲ್ಲಿ ಮುಳುಗಿರುವ ಯುವಜನ: ಅಜಕ್ಕಳ ಗಿರೀಶ್ ಭಟ್ ಬೇಸರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 21:48 IST
Last Updated 14 ನವೆಂಬರ್ 2021, 21:48 IST
ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿಗೆ ‘ಅನಕೃ ಪ್ರಶಸ್ತಿ’ ಹಾಗೂ ಪೊಲೀಸ್ ಅಧಿಕಾರಿ ಸವಿತಾ ಶ್ರೀನಿವಾಸ್ ಅವರಿಗೆ ‘ಕೆ.ಟಿ.ಚಂದ್ರಶೇಖರ್ ಸಾಹಿತ್ಯಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಶೋಭಾ ಗೌತಮ್‌, ಲೇಖಕಿ ಎಲ್‌.ಜಿ.ಮೀರಾ, ಅಜಕ್ಕಳ ಗಿರೀಶ್‌ ಭಟ್, ಶಾ.ಮಂ.ಕೃಷ್ಣರಾವ್, ಪಿ.ವಿ.ನಾರಾಯಣ, ಗೌತಮ್‌ ಅನಕೃ, ವಕೀಲ ಅಶೋಕ ಹಾರನಹಳ್ಳಿ, ಲೇಖಕಿ ಸಂ‌ಧ್ಯಾರೆಡ್ಡಿ ಇದ್ದಾರೆ.
ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿಗೆ ‘ಅನಕೃ ಪ್ರಶಸ್ತಿ’ ಹಾಗೂ ಪೊಲೀಸ್ ಅಧಿಕಾರಿ ಸವಿತಾ ಶ್ರೀನಿವಾಸ್ ಅವರಿಗೆ ‘ಕೆ.ಟಿ.ಚಂದ್ರಶೇಖರ್ ಸಾಹಿತ್ಯಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಶೋಭಾ ಗೌತಮ್‌, ಲೇಖಕಿ ಎಲ್‌.ಜಿ.ಮೀರಾ, ಅಜಕ್ಕಳ ಗಿರೀಶ್‌ ಭಟ್, ಶಾ.ಮಂ.ಕೃಷ್ಣರಾವ್, ಪಿ.ವಿ.ನಾರಾಯಣ, ಗೌತಮ್‌ ಅನಕೃ, ವಕೀಲ ಅಶೋಕ ಹಾರನಹಳ್ಳಿ, ಲೇಖಕಿ ಸಂ‌ಧ್ಯಾರೆಡ್ಡಿ ಇದ್ದಾರೆ.   

ಬೆಂಗಳೂರು: ‘ಯುವ ಸಮೂಹಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದು, ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ’ ಎಂದುಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್ ಬೇಸರ ವ್ಯಕ್ತಪಡಿಸಿದರು.

ಅ.ನ.ಕೃ.ಪ್ರತಿಷ್ಠಾನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಅನಕೃ ಪ್ರಶಸ್ತಿ’ ಹಾಗೂ ‘ಕೆ.ಟಿ.ಚಂದ್ರಶೇಖರ್ ಸಾಹಿತ್ಯಶ್ರೀ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅ.ನ.ಕೃಷ್ಣರಾಯರು (ಅನಕೃ) ಚಿಕ್ಕ ವಯಸ್ಸಿನಲ್ಲೇ ಬರವಣಿಗೆ ಆರಂಭಿಸಿದರು.ಅವರು ಸದಾ ಕಾಲ ನೆನಪಿನಲ್ಲಿ ಉಳಿಯುವ ಸಾಹಿತ್ಯವನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ್ದಾರೆ.ಕಾದಂಬರಿ ಸೇರಿದಂತೆ ವೈವಿಧ್ಯಮಯ ಸಾಹಿತ್ಯ ರಚಿಸಿದ್ದರು’ ಎಂದರು.

ADVERTISEMENT

‘ಸಂಗೀತ ಮತ್ತು ಕಲೆಗಳ ಆಸಕ್ತಿ ಉಳ್ಳವರು ಉತ್ತಮ ಸಾಹಿತ್ಯ ರಚಿಸುತ್ತಾರೆ ಎನ್ನುವ ಮಾತಿದೆ. ಅದರಂತೆ ಕಲಾ ಪ್ರೇಮಿಗಳೂ ಆಗಿದ್ದ ಅನಕೃ ಅವರಿಂದ ಸಂಧ್ಯಾರಾಗ ಸೇರಿದಂತೆ ಹಲವಾರು ಉತ್ತಮ ಕೃತಿಗಳು ಮೂಡಿಬಂದಿವೆ’ ಎಂದು ಹೇಳಿದರು.

‘ಅನಕೃ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ವಿದ್ವಾಂಸ ಟಿ.ವಿ.ವೆಂಕಟಾಚಲಶಾಸ್ತ್ರಿ,‘ ಅಪರಿಚಿತರನ್ನೂ ಪ್ರೀತಿ, ವಿಶ್ವಾಸದಿಂದ ಮಾತನಾಡಿಸುವುದು ಅನಕೃ ಅವರ ಸ್ವಭಾವವಾಗಿತ್ತು. ಹೆಚ್ಚು ಓದುಗರನ್ನು ಸೃಷ್ಟಿಸಿದ್ದ ಅವರು ತಮ್ಮ ಜೊತೆಗೆ ಹಲವರನ್ನು ಬೆಳೆಸಿದರು’ ಎಂದು ನೆನೆದರು.

ಅನಕೃ ಶಿಷ್ಯ ಶಾ.ಮಂ.ಕೃಷ್ಣರಾಯ, ‘ಕನ್ನಡಕ್ಕಾಗಿ ಹೋರಾಟದ ಮೂಲಕ ಶ್ರಮಿಸಿದ ಅನಕೃ ಅವರನ್ನು ಸರ್ಕಾರ ನೆನೆಯುತ್ತಿಲ್ಲ. ಅಖಂಡ ಕರ್ನಾಟಕದ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಆರ್ಥಿಕ ಸಂಕಷ್ಟದ ಕಾಲದಲ್ಲೂ ಎದೆಗುಂದಲಿಲ್ಲ. ಅವರ ಸಾಧನೆಗಳನ್ನು ಯುವ ಸಮೂಹಕ್ಕೆ ತಿಳಿಸಬೇಕಾಗಿದೆ. ಆದರೆ,ಸರ್ಕಾರದ ಈ ನಡೆ ಬಹಳ ಬೇಸರ ಉಂಟುಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ: ಪೊಲೀಸ್ ಅಧಿಕಾರಿಯಾಗಿರುವಲೇಖಕಿ ಸವಿತಾ ಶ್ರೀನಿವಾಸ್ ಅವರಿಗೆ ‘ಕೆ.ಟಿ.ಚಂದ್ರಶೇಖರ್ ಸಾಹಿತ್ಯಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅನಕೃ ಸ್ವರ್ಣ ಜಯಂತಿಯ ಸ್ಮರಣ ಗ್ರಂಥ ‘ಅದಮ್ಯ ಚೇತನ’ ಪುಸ್ತಕ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.