ADVERTISEMENT

ಸಿಂಗ್‌ ಪುತ್ರನ ಮದುವೆ: ದಾರಿ ಹುಡುಕುತ್ತಿರುವ ಆಯೋಗ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:38 IST
Last Updated 28 ನವೆಂಬರ್ 2019, 19:38 IST

ಬೆಂಗಳೂರು: ಡಿಸೆಂಬರ್‌ 1ರಂದು ನಡೆಯಲಿರುವ ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರ ಮಗನ ಮದುವೆಯಅದ್ದೂರಿ ಕಾರ್ಯಕ್ರಮ ತಡೆಯಲು ಯಾವುದಾದರೂ ಕಾನೂನು, ಸರ್ಕಾರದ ಆದೇಶದಲ್ಲಿ ಮಾರ್ಗೋಪಾಯಗಳಿವೆಯೇ ಎಂದು ಚುನಾವಣಾ ಆಯೋಗ ಚಿಂತನೆ ನಡೆಸುತ್ತಿದೆ.

ಈ ಉದ್ದೇಶದಿಂದ, ರಾಜ್ಯದಲ್ಲಿ 1972ರಲ್ಲಿ ಜಾರಿಗೆ ಬಂದಿದ್ದ ‘ಕರ್ನಾಟಕ ಅತಿಥಿ ನಿಯಂತ್ರಣ ಆದೇಶ’ ಈಗಲೂ ಜಾರಿಯಲ್ಲಿದೆಯೇ ಎಂದು ಆಹಾರ ಇಲಾಖೆಯಿಂದ ಆಯೋಗ ಮಾಹಿತಿ ಕೇಳಿದೆ ಎಂದು ಗೊತ್ತಾಗಿದೆ.

ಮಿತವ್ಯಯ ಜಾರಿ ಉದ್ದೇಶದಿಂದ ರಾಜ್ಯ ಸರ್ಕಾರ 1972ರ ಜೂನ್‌ 26ರಂದು ‘ದಿ ಕರ್ನಾಟಕ ಗೆಸ್ಟ್‌ ಕಂಟ್ರೋಲ್‌ ಆದೇಶ’ವನ್ನು ಜಾರಿಗೆ ತಂದಿತ್ತು. ಈ ಆದೇಶದ ಪ್ರಕಾರ, ಸಣ್ಣ ಕಾರ್ಯಕ್ರಮಗಳಲ್ಲಿ 25ಕ್ಕಿಂತ ಹೆಚ್ಚು ಜನರನ್ನು ಸೇರಿಸುವುದು ಹಾಗೂ ಮದುವೆ ಮತ್ತು ಪುಣ್ಯತಿಥಿ ಕಾರ್ಯಕ್ರಮಗಳಿಗೆ 100 ಜನರಿಗಿಂತ ಹೆಚ್ಚು ಜನರನ್ನು ಸೇರಿಸಿ, ವೆಚ್ಚ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ADVERTISEMENT

ಈ ಆದೇಶದ ಅಡಿಯಲ್ಲಿ ಆನಂದ್‌ ಸಿಂಗ್‌ ಅವರ ಮಗನ ಮದುವೆ ಕಾರ್ಯಕ್ರಮ ಸ್ಥಗಿತಗೊಳಿಸಬಹುದೇ ಎಂದು ಆಯೋಗ ಚಿಂತನೆ ನಡೆಸಿತ್ತು. ಆದರೆ, ಈ ಆದೇಶವನ್ನು ರಾಜ್ಯ ಸರ್ಕಾರ 1995ರ ಜೂನ್‌ 18ರಂದು ವಾಪಸು ಪಡೆದಿದೆ. ಅಷ್ಟೇ ಅಲ್ಲ, ಈ ಆದೇಶದ ಅಡಿ ಈವರೆಗೂ ಯಾವುದೇ ಕಾರ್ಯಕ್ರಮವನ್ನು ಸ್ಥಗಿತ ಗೊಳಿಸಿದ ಮಾಹಿತಿ ಆಹಾರ ಇಲಾಖೆ ಬಳಿ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ ಎಂದೂ ಗೊತ್ತಾಗಿದೆ.

ಇದೆ 5ರಂದು ವಿಜಯನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಮದುವೆ ನೆಪದಲ್ಲಿ ಮತದಾರರನ್ನು ಸೆಳೆಯುವ ಸಾಧ್ಯತೆ ಇದೆ. ಹೀಗಾಗಿ, ಕಾರ್ಯಕ್ರಮಕ್ಕೆ ತಡೆ ನೀಡಬೇಕೆಂದು ಕಾಂಗ್ರೆಸ್‌ ನಾಯಕರು ಆಯೋಗದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.