ADVERTISEMENT

ಮುಹೂರ್ತ ನೋಡಿ ಖಾತೆ ವಹಿಸಿಕೊಳ್ಳುವೆ: ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 20:49 IST
Last Updated 15 ಆಗಸ್ಟ್ 2021, 20:49 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಹೊಸಪೇಟೆ (ವಿಜಯನಗರ): ‘ಮುಹೂರ್ತ ನೋಡಿ ಖಾತೆ ಸ್ವೀಕರಿಸುತ್ತೇನೆ. ದೇವರ ಮುಹೂರ್ತ, ನನ್ನ ನಕ್ಷತ್ರ ನೋಡಿಕೊಂಡು ಖಾತೆ ವಹಿಸಿಕೊಳ್ಳುತ್ತೇನೆ’ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

ಸುದ್ದಿಗಾರರ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ದಿಟ್ಟ, ಸಮರ್ಥ ಅಧಿಕಾರಿಗಳಿದ್ದಾರೆ. ಅಲ್ಲಿಯವರೆಗೆ ಅವರು ಖಾತೆ ನೋಡುತ್ತಾರೆ. ನಾನು ಅಧಿಕಾರ ವಹಿಸಿಕೊಳ್ಳದಿದ್ದರೆ ಅಭಿವೃದ್ಧಿ ಕುಂಠಿತವಾಗುವುದಿಲ್ಲ. ಜನಪ್ರತಿನಿಧಿಗಳ ಮೇಲೆ ವ್ಯವಸ್ಥೆ ನಡೀತಾ ಇಲ್ಲ. ಶಾಸಕಾಂಗ, ಕಾರ್ಯಾಂಗ ಬಂಡಿ ಇದ್ದಂತೆ' ಎಂದು ಹೇಳಿದರು.

‘ಸಚಿವ ಬಿ. ಶ್ರೀರಾಮುಲು ಅವರು ನನಗೆ ಫೋನ್‌ಮಾಡಿದ್ದು ನಿಜ. ಆದರೆ, ಅವರ ಇಲಾಖೆ ಕುರಿತ ಸಭೆಗೆ ಆಹ್ವಾನಿ ಸಿದರೆ ಹೊರತು ಖಾತೆ ಬಗ್ಗೆ ಏನೂ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

'ತಾಲ್ಲೂಕಿನ ಹಂಪಿ–ಕಮಲಾಪುರ ಸಮೀಪದ 50 ಎಕರೆಯಲ್ಲಿ ಫಿಲ್ಮ್‌ ಸಿಟಿ, ನಗರದಲ್ಲಿ ₹100 ಕೋಟಿಯಲ್ಲಿ ವಿವಿಧ ಆಟೋಟಗಳಿಗೆ ಒಳ ಮತ್ತು ಹೊರ ಕ್ರೀಡಾಂಗಣ ನಿರ್ಮಿಸಲಾಗುವುದು. ವಿಜಯನಗರ ಜಿಲ್ಲೆಯಲ್ಲಿ ಕಚೇರಿಗಳ ನಿರ್ಮಾಣ, ಅಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದಿದೆ. ಆರ್ಥಿಕ ಇಲಾಖೆಯಿಂದ ಈಗಾಗಲೇ ಜಿಲ್ಲೆಗೆ ₹50 ಕೋಟಿ ಬಿಡುಗಡೆಯಾಗಿದೆ. ಖಾತೆ ಗೊಂದಲದ ಬಗ್ಗೆ ಇನ್ನೇನೂ ಹೇಳಲಾರೆ’ ಎಂದು ಹೇಳಿ ನಿರ್ಗಮಿಸಿದರು.

ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಹಂಚಿಕೆ ಮಾಡಲಾಗಿದೆ. ಆದರೆ, ಇದುವರೆಗೆ ಅವರು ಖಾತೆ ವಹಿಸಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.