ADVERTISEMENT

ವಿಶೇಷ ಪೂಜೆ ಸಲ್ಲಿಸಿ ದೇವಾಲಯ ಸುತ್ತಿದ ಆನಂದ್‌ ಸಿಂಗ್‌

ಮೂರು ದೇವಸ್ಥಾನಗಳಿಗೆ ತಲಾ ಒಂಬತ್ತು ಕೆ.ಜಿ.ಯ ಬೆಳ್ಳಿದೀಪ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 14:24 IST
Last Updated 10 ಫೆಬ್ರುವರಿ 2019, 14:24 IST
ಶಾಸಕ ಆನಂದ್‌ ಸಿಂಗ್‌ ಅವರು ಪತ್ನಿ ಲಕ್ಷ್ಮಿ ಸಿಂಗ್‌ ಅವರೊಂದಿಗೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿರುವುದು
ಶಾಸಕ ಆನಂದ್‌ ಸಿಂಗ್‌ ಅವರು ಪತ್ನಿ ಲಕ್ಷ್ಮಿ ಸಿಂಗ್‌ ಅವರೊಂದಿಗೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿರುವುದು   

ಹೊಸಪೇಟೆ: ಶಾಸಕ ಜೆ.ಎನ್‌. ಗಣೇಶ್‌ ಅವರಿಂದ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ಆನಂದ್‌ ಸಿಂಗ್‌, ಭಾನುವಾರ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಗರದ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ಹೋಮ ಹವನ ಮಾಡಿದರು. ನಂತರ ಊರಮ್ಮ ದೇವಿ ಹಾಗೂ ರಾಂಪುರ ದುರ್ಗಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ, ಎರಡು ದೇವಾಲಯಗಳಿಗೆ ತಲಾ ಒಂಬತ್ತು ಕೆ.ಜಿ.ಯ ಎರಡು ಬೆಳ್ಳಿ ದೀಪಗಳನ್ನು ಸಮರ್ಪಿಸಿದರು. ಬಳಿಕ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ವಿರೂಪಾಕ್ಷೇಶ್ವರ, ಪಂಪಾದೇವಿ ಮತ್ತು ಭುವನೇಶ್ವರಿ ದೇವಿಯ ದರ್ಶನ ಪಡೆದರು. ಅವರೊಂದಿಗೆ ಅವರ ಪತ್ನಿ ಲಕ್ಷ್ಮಿ ಸಿಂಗ್‌ ಇದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್‌ ಸಿಂಗ್‌, ‘ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 20 ದಿನಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲಿಯವರೆಗೆ ವಾರಕ್ಕೊಮ್ಮೆ ಪರೀಕ್ಷೆ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಅಧಿವೇಶನ ಮುಗಿಯುವವರೆಗೆ ಬೆಂಗಳೂರಿನಲ್ಲಿ ಇರುವಂತೆ ಪಕ್ಷದ ಮುಖಂಡರು ಸೂಚಿಸಿದ್ದಾರೆ. ಹಾಗಾಗಿ ಫೆ. 11ರಂದು ಪುನಃ ಬೆಂಗಳೂರಿಗೆ ಹೋಗುತ್ತೇನೆ. ಹೆಚ್ಚು ಹೊತ್ತು ಅಧಿವೇಶನದಲ್ಲಿ ಕೂರಲು ಆಗುತ್ತಿಲ್ಲ. ಅಗತ್ಯ ಬಿದ್ದರಷ್ಟೇ ಹೋಗುತ್ತೇನೆ. ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ನನಗೇನೂ ಕೇಳಬೇಡಿ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.