ADVERTISEMENT

ಗ್ರಾಚ್ಯುಟಿ ನೀಡಲು ಒಪ್ಪಿಗೆ: ಅಂಗನವಾಡಿ ನೌಕರರ ಪ್ರತಿಭಟನೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 16:36 IST
Last Updated 1 ಫೆಬ್ರುವರಿ 2023, 16:36 IST
ಹೋರಾಟ ಯಶಸ್ವಿಯಾದ ನಂತರ ಸಂಭ್ರಮದಲ್ಲಿ ಮನೆ ಕಡೆಗೆ ಹೊರಟ ಅಂಗನವಾಡಿ ನೌಕರರು –ಪ್ರಜಾವಾಣಿ ಚಿತ್ರ
ಹೋರಾಟ ಯಶಸ್ವಿಯಾದ ನಂತರ ಸಂಭ್ರಮದಲ್ಲಿ ಮನೆ ಕಡೆಗೆ ಹೊರಟ ಅಂಗನವಾಡಿ ನೌಕರರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗ್ರಾಚ್ಯುಟಿ ವಿತರಣೆ ಹಾಗೂ ಶಿಕ್ಷಕರೆಂದು ಪರಿಗಣಿಸುವಂತೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ನೌಕರರು ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ಹಿಂಪಡೆದಿದ್ದಾರೆ.

‘ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಗ್ರಾಚ್ಯುಟಿ ಕಾಯ್ದೆ 1972ರ ಪ್ರಕಾರ ಗ್ರಾಚ್ಯುಟಿ ನೀಡುವ ಕುರಿತು ಮುಖ್ಯಮಂತ್ರಿ ಅನುಮೋದನೆ ಮೇರೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಹೀಗಾಗಿ ಹೋರಾಟ ಹಿಂಪಡೆಯಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದ್ದಾರೆ.

ಶಾಲಾ ಪೂರ್ವ ಶಿಕ್ಷಣಕ್ಕಾಗಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ತನಕ ನಿರ್ದಿಷ್ಟ ಸಮಯ ಮೀಸಲಿರಿಸಿದ ಲಿಖಿತ ಆದೇಶ ನೀಡಿದೆ. ಮಿನಿ ಅಂಗನವಾಡಿ ಹಾಗೂ ಸಹಾಯಕಿಯರ ಪದೋನ್ನತಿ ಕುರಿತು ಲೋಪ–ದೋಷಗಳಿದ್ದ ಆದೇಶ ವಾಪಸ್ ಪಡೆದು ತಿದ್ದುಪಡಿ ಆದೇಶ ನೀಡಿದೆ. ಕಟ್ಟಡ ವೆಚ್ಚವನ್ನು ₹12 ಲಕ್ಷದಿಂದ ₹20 ಲಕ್ಷಕ್ಕೆ ಏರಿಕೆ ಮಾಡಲು ಒಪ್ಪಿದೆ. ಮಕ್ಕಳಿಗೆ ಶೂ, ಸಮವಸ್ತ್ರ ಹಾಗೂ ಮೂಲಸೌಕರ್ಯ ಹೆಚ್ಚಿಸಲು ಒಪ್ಪಿಗೆ ನೀಡಿದೆ ಎಂದು ವಿವರಿಸಿದ್ದಾರೆ.

ADVERTISEMENT

ಅಂಗನವಾಡಿಗಳಲ್ಲಿ ಶಾಲಾಪೂರ್ವ ಶಿಕ್ಷಣ ಪಡೆದ ದೃಢೀಕರಣ ಪತ್ರ ನೀಡಲು ಸಮ್ಮತಿ ನೀಡಿದೆ. ಅಂಗನವಾಡಿ ನೌಕರರ ಆರೋಗ್ಯ ತಪಾಸಣೆ ಸೇರಿ ಇನ್ನುಳಿದ ಬೇಡಿಕೆಗಳ ಬಗ್ಗೆ ಅಧಿಕಾರಿಗಳು ಮಾತುಕತೆ ಸಂದರ್ಭದಲ್ಲಿ ಒಪ್ಪಿದ್ದಾರೆ. 10 ದಿನಗಳಿಂದ ಅಹೋರಾತ್ರಿ ನಡೆಸಿದ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.