ದಾವಣಗೆರೆ: ನಿಷೇಧಾಜ್ಞೆ ನಡುವೆಯೂ ಪೌರತ್ವ (ತಿದ್ದುಪಡಿ) ವಿರೋಧಿಸಿ ಇಲ್ಲಿನ ‘ಸಂವಿಧಾನ ಉಳಿಸಿ ವೇದಿಕೆ’ಯಡಿ ವಿವಿಧ ಸಂಘಟನೆಗಳ ಮುಖಂಡರು ಆಜಾದ್ನಗರ ಠಾಣೆ ಎದುರು ಶುಕ್ರವಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸಲು ಅನುಮತಿ ಪಡೆಯಲು ಮುಸ್ಲಿಂ ಸಮಾಜದ ಮುಖಂಡರು ಠಾಣೆಗೆ ಬಂದಿದ್ದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಅನುಮತಿ ನಿರಾಕರಿಸಿದರು. ಇದರಿಂದ ಠಾಣೆಯ ಎದುರೇ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಬಂದು ಪೊಲೀಸ್ ಬಂದೋಬಸ್ತ್ ಕೈಗೊಂಡರು.
ಮಧ್ಯಾಹ್ನದ ವೇಳೆ ಠಾಣೆಯ ಮುಂದೆ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಜಿಲ್ಲಾಧಿಕಾರಿ ಬರುವವರೆಗೂ ಠಾಣೆಯ ಎದುರೇ ಕಾದು ಕುಳಿತರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಸ್ವೀಕರಿಸಿದರು. ಆ ವೇಳೆ ಜಿಲ್ಲಾಧಿಕಾರಿ ರಾಷ್ಟ್ರಗೀತೆ ಹಾಡಲು ಹೇಳಿದರು. ಎಲ್ಲರೂ ರಾಷ್ಟ್ರಗೀತೆಗೆ ಧ್ವನಿಗೂಡಿಸಿದರು.
ಸಮಾಜದ ಮುಖಂಡ ಸೈಯ್ಯದ್ ಸೈಫುಲ್ಲಾ ಮಾತನಾಡಿ, ‘ಸ್ವಾತಂತ್ರ್ಯ ಸಂದರ್ಭಗಳಲ್ಲಿ ಈ ದೇಶಕ್ಕೆ ಅನೇಕ ಮಹನೀಯರು ಪ್ರಾಣ ತೆತ್ತಿದ್ದಾರೆ. ದೇಶ ಒಗ್ಗಟ್ಟಾಗಿ, ಶಾಂತಿಯುತವಾಗಿ ಇರಬೇಕು. ದೇಶದ ನಾಯಕರು ಸಮಸ್ಯೆಗಳನ್ನು ಬಗೆಹರಿಸುವ ಬದಲು ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಹಿಂಪಡೆಯುವವರೆಗೂ ನಾವು ಸುಮ್ಮನಿರುವುದಿಲ್ಲ; ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.
ಚಳ್ಳಕೆರೆ ವರದಿ: ಕಾಯ್ದೆ ವಿರೋಧಿಸಿ ಘರ್ಷಣೆಗಿಳಿದಿರುವುದನ್ನು ಖಂಡಿಸಿ ಇಲ್ಲಿನ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಾಲ್ಲೂಕು ಸಂಚಾಲಕ ಬಾನುಪ್ರಕಾಶ್, ‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ
ಯನ್ನು ಸಹಿಸದ ದೇಶದ್ರೋಹಿಗಳು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.