ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ನೀಡುವ ಅಭಿಯಾನ ಪ್ರಾರಂಭವಾಗಿ ಐದು ತಿಂಗಳು ಕಳೆದರೂ 45 ವರ್ಷ ಮೇಲ್ಪಟ್ಟವರಲ್ಲಿ ಎರಡು ಡೋಸ್ ಲಸಿಕೆ ಪೂರೈಸಿದವರ ಸಂಖ್ಯೆ ಶೇ 20ರ ಗಡಿಯನ್ನೂ ದಾಟಿಲ್ಲ. ಇದರಿಂದಾಗಿ ‘ಸಮೂಹ ರೋಗ ನಿರೋಧಕ ಶಕ್ತಿ’ (ಹರ್ಡ್ ಇಮ್ಯುನಿಟಿ) ವೃದ್ಧಿಯಾಗಿಲ್ಲ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ರಾಜ್ಯದಲ್ಲಿ ಕಳೆದ ಜ.16ರಿಂದಲೇ ಲಸಿಕೆ ವಿತರಣೆ ಅಭಿಯಾನ ಪ್ರಾರಂಭವಾಗಿದೆ. ಅಡ್ಡ ಪರಿಣಾಮದ ಭಯ, ಹಿಂಜರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಪ್ರಾರಂಭದ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಗುರುತಿಸಲಾದ ಫಲಾನುಭವಿಗಳು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಇದರಿಂದಾಗಿ ಸಮೂಹ ರೋಗ ನಿರೋಧಕ ಶಕ್ತಿ ವೃದ್ಧಿಗೆ ಕೂಡ ಹಿನ್ನಡೆಯಾಯಿತು.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಈವರೆಗೆ ಲಸಿಕೆ ಪಡೆದವರಲ್ಲಿ ಶೇ 0.017 ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಅಂದರೆ, ಇಬ್ಬರಲ್ಲಿ ತೀವ್ರ ಸ್ವರೂಪದ ಅಡ್ಡ ಪರಿಣಾಮ ಹಾಗೂ 23 ಮಂದಿಯಲ್ಲಿ ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಗೋಚರಿಸಿವೆ.
ಶೇ 18ರಷ್ಟು ಪ್ರತಿಕಾಯ: ರಾಜ್ಯದಲ್ಲಿ ಈವರೆಗೆ ಎರಡು ಹಂತದಲ್ಲಿ ಸೆರೋ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಯು ಎಷ್ಟು ಮಂದಿಯಲ್ಲಿ ಪ್ರತಿಕಾಯ ಅಭಿವೃದ್ಧಿಯಾಗಿದೆ ಎಂದು ತಿಳಿಯಲು ಸಹಕಾರಿ. ಸೆರೋ ಸಮೀಕ್ಷೆ ಹಾಗೂ ವೈದ್ಯಕೀಯ ತಜ್ಞರ ಪ್ರಕಾರ ಸಮುದಾಯದ ಶೇ 18ರಷ್ಟು ಮಂದಿಯಲ್ಲಿ ಮಾತ್ರ ಪ್ರತಿಕಾಯ ಅಭಿವೃದ್ಧಿಯಾಗಿದೆ. ಈ ಪ್ರಮಾಣ ಶೇ 75ರಿಂದ 80ಕ್ಕೆ ಏರಿಕೆಯಾದಾಗ ಸೋಂಕನ್ನು ನಿಯಂತ್ರಿಸಬಹುದು. ಅದು ಲಸಿಕೆಯಿಂದ ಮಾತ್ರ ಸಾಕಾರವಾಗಲಿದೆ.
ಮೊದಲ ಹಂತದ ಸೆರೋ ಸಮೀಕ್ಷೆಯು 2020ರ ಸೆಪ್ಟೆಂಬರ್ 3ರಿಂದ 16ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆದಿತ್ತು. 16,585 ಜನರ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಶೇ 16ರಷ್ಟು ಜನರಲ್ಲಿ ಕೋವಿಡ್ ಪ್ರತಿಕಾಯ ಇರುವುದು ತಿಳಿದುಬಂದಿತ್ತು. ಎರಡನೇ ಹಂತದ ಸಮೀಕ್ಷೆಯನ್ನು ಜನವರಿ ಅಂತ್ಯಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲಾಗಿತ್ತು. ಪ್ರತಿ ಜಿಲ್ಲೆಯಿಂದ ಸುಮಾರು 1,100 ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಎರಡನೇ ಅಲೆ ಬಳಿಕ ಸಮುದಾಯದ ಎಷ್ಟು ಮಂದಿಯಲ್ಲಿ ಪ್ರತಿಕಾಯ ವೃದ್ಧಿಯಾಗಿದೆ ಎಂಬುದನ್ನು ನಿಖರವಾಗಿ ತಿಳಿಯಬೇಕಾದರೆ ಮೂರನೇ ಹಂತದ ಸೆರೋ ಸಮೀಕ್ಷೆ ನಡೆಸಬೇಕು ಎನ್ನುತ್ತಾರೆ ವೈದ್ಯಕೀಯ ತಜ್ಞರು.
‘ಕೋವಿಡ್ ಲಸಿಕೆ ಸುರಕ್ಷಿತ’
‘ಸದ್ಯ ನೀಡಲಾಗುತ್ತಿರುವ ‘ಕೋವಿಶೀಲ್ಡ್’, ‘ಕೋವ್ಯಾಕ್ಸಿನ್ ಹಾಗೂ ‘ಸ್ಪುಟ್ನಿಕ್ ವಿ’ ಲಸಿಕೆಗಳು ಪೂರ್ಣ ಪ್ರಮಾಣದಲ್ಲಿ ಸುರಕ್ಷಿತವಾಗಿವೆ. ಈ ಲಸಿಕೆಗಳಿಗೆ ಹಂದಿ ಅಥವಾ ದನದ ಕೊಬ್ಬಿನ ಅಂಶವನ್ನು ಸೇರಿಸಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಸುದ್ದಿ. ಇಂತಹ ವಂದತಿಗಳಿಗೆ ಕಿವಿಗೊಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸಂದೇಶಗಳಿಗೆ ಕಡಿವಾಣ ಹಾಕಬೇಕಿದೆ. ಅಡ್ಡ ಪರಿಣಾಮದ ಬಗ್ಗೆಯೂ ಭಯ ಪಡಬೇಕಾಗಿಲ್ಲ.
‘ಕೋವಿಡ್ ನಿಯಂತ್ರಿಸಬಲ್ಲ ಸಮೂಹ ರೋಗ ನಿರೋಧಕ ಶಕ್ತಿ ಇನ್ನೂ ವೃದ್ಧಿಯಾಗಿಲ್ಲ. ಹಲವರು ಈಗಾಗಲೇ ಸೋಂಕಿತರಾಗಿ ಚೇತರಿಸಿಕೊಂಡರೂ ಅವರ ದೇಹದಲ್ಲಿ ವೃದ್ಧಿಯಾಗುವ ಪ್ರತಿಕಾಯಗಳು ಗರಿಷ್ಠ ಆರು ತಿಂಗಳು ಮಾತ್ರ ಇರಲಿವೆ. ಲಸಿಕೆಯ ಮೂಲಕ ವೃದ್ಧಿಯಾಗುವ ರೋಗ ನಿರೋಧಕ ಶಕ್ತಿಯು ನೈಸರ್ಗಿಕ ರೋಗ ನಿರೋಧಕ ಶಕ್ತಿಗಿಂತ ಹೆಚ್ಚು ಕಾಲ ಇರುತ್ತದೆ.
‘ಲಸಿಕೆ ಪಡೆದ ಬಳಿಕ ಸೋಂಕಿತರಾದರೂ ಅದರ ತೀವ್ರತೆ ಕಡಿಮೆ ಇರಲಿದೆ. ಹಾಗಾಗಿ, ಮೂರನೇ ಅಲೆ ಕಾಣಿಸಿಕೊಳ್ಳುವ ಮುನ್ನ ಈಗಾಗಲೇ ಗುರುತಿಸಲಾದ ಎಲ್ಲ ಫಲಾನುಭವಿಗಳೂ ಲಸಿಕೆ ಪಡೆದುಕೊಳ್ಳಬೇಕು’
– ಡಾ. ವಿ. ರವಿ, ವೈರಾಣು ತಜ್ಞ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.