ADVERTISEMENT

ಕ್ಷಮೆ ಯಾಚಿಸಿದ ಲಿಂಗಪ್ಪ: ರಾಜಕೀಯ ನಿವೃತ್ತಿ ಇಂಗಿತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:21 IST
Last Updated 7 ನವೆಂಬರ್ 2018, 20:21 IST

ರಾಮನಗರ: ಪುತ್ರ ಎಲ್. ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ಕಣದಿಂದ ಹಿಂದೆ ಸರಿದಿದ್ದಕ್ಕೆ ಬಹಿರಂಗವಾಗಿ ಜನರ ಕ್ಷಮೆ ಯಾಚಿಸಿದ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ, ಪರಿಷತ್‌ ಸದಸ್ವತ್ವ ಅವಧಿ ಮುಗಿದ ಬಳಿಕ ರಾಜಕೀಯವಾಗಿ ನಿವೃತ್ತಿ ಹೊಂದುವುದಾಗಿಯೂ ಪ್ರಕಟಿಸಿದರು.

ಕ್ಷೇತ್ರದಲ್ಲಿನ ಈಚಿನ ರಾಜಕೀಯ ಬೆಳವಣಿಗೆಗಳ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಲಿಂಗಪ್ಪ, ಮಗನ ನಡೆ ಹೇಡಿತನದ ಪರಮಾವಧಿ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಮನಗರ ಉಪ ಚುನಾವಣೆಯಲ್ಲಿ ನನ್ನ ಮಗ ದುರಂತ ನಾಯಕನ ಪಾತ್ರ ವಹಿಸಿದ್ದಾನೆ. ಇದರಿಂದಾಗಿ ನಮ್ಮ ಕುಟುಂಬದವರು ತಲೆ ಎತ್ತಿ ಓಡಾಡದಂತಹ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ನಾನು ಕಟ್ಟಿದ್ದ ಸ್ವಾಭಿಮಾನಿ ರಾಜಕೀಯದ ಕೋಟೆ ಇಂದು ಉರುಳಿಬಿದ್ದಿದೆ. ನಮ್ಮ ಮನೆಯಲ್ಲಿ ಈವರೆಗೂ ಸೂತಕದ ಛಾಯೆ ಇದೆ. ಚಂದ್ರಶೇಖರ್ ನಡೆಯಿಂದ ಜಿಲ್ಲೆಯ ಸಾವಿರಾರು ಮತದಾರರಿಗೆ, ಬಿಜೆಪಿ ಕಾರ್ಯಕರ್ತರಿಗೂ ನೋವಾಗಿದೆ, ನಾನು ಅವರೆಲ್ಲರ ಕ್ಷಮೆ ಕೋರುತ್ತೇನೆ’ ಎಂದು ಕೈ ಮುಗಿದರು. ಇದರ ನೈತಿಕ ಹೊಣೆ ಹೊತ್ತು ಮುಂದೆ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯುವುದಾಗಿಯೂ ಹೇಳಿದರು.

ADVERTISEMENT

‘ನಾನು ದೂರದ ಬಳ್ಳಾರಿಯಲ್ಲಿದ್ದೆ. ಇಲ್ಲಿನ ಯಾವ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಗೊತ್ತಿರಲಿಲ್ಲ. ಡಿ.ಕೆ. ಸಹೋದರರಿಗೆ ಅನಿತಾ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವುದೊಂದೇ ಗುರಿ ಆಗಿತ್ತು. ಈ ಮೂಲಕ ಬಿಜೆಪಿಗೆ ಇರಿಸು ಮುರಿಸು ಉಂಟು ಮಾಡಬೇಕು ಎನ್ನುವುದಾಗಿತ್ತು. ಸುರೇಶ್ ನನ್ನ ಮಗನನ್ನು ಹೈಜಾಕ್‌ ಮಾಡಿದ್ದಾರೆ ಎನ್ನುವ ಆರೋಪವನ್ನು ಒಪ್ಪಲಾಗುತ್ತಿಲ್ಲ. ನಿರಾಕರಿಸಲೂ ಆಗುತ್ತಿಲ್ಲ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.