ADVERTISEMENT

ಕೊರೊನಾಗೆ ರಾಜ್ಯದಲ್ಲಿ ಮೊದಲ ಪೊಲೀಸ್ ಸಾವು

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 8:06 IST
Last Updated 16 ಜೂನ್ 2020, 8:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮೊದಲ ಪೊಲೀಸರೊಬ್ಬರು ಸಾವನ್ನಪ್ಪಿದ್ದಾರೆ.

ನಗರದ ವಿ.ವಿ.ಪುರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 59 ವರ್ಷದ ಸಹಾಯಕ ಸಬ್ ಇನ್‌ಸ್ಪೆಕ್ಟರ್, ಸೋಮವಾರ ಥಣಿಸಂದ್ರದಲ್ಲಿರುವ ತಮ್ಮ ನಿವಾಸದಲ್ಲಿ ದಿಢೀರ್ ಕುಸಿದು ಬಿದ್ದಿದ್ದರು.

ಹೃದಯಾಘಾತಆಗಿರಬಹುದೆಂದು ತಿಳಿದ ಕುಟುಂಬಸ್ಥರು ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗ ಮಧ್ಯೆಯೇ ಅವರು ಅಸುನೀಗಿದ್ದರು. ಅವರ ಗಂಟಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದಿದ್ದು, ಕುಟುಂಬಸ್ಥರು ಹಾಗೂ ಪೊಲೀಸ್ ಇಲಾಖೆ ಆತಂಕಕ್ಕೆ ಕಾರಣವಾಗಿದೆ.

ADVERTISEMENT

ಮೃತ ಎಎಸ್‌ಐ ಅವರು ಸೇವೆಯಿಂದ ನಿವೃತ್ತಿಯಾಗಲು 15 ದಿನವಷ್ಟೇ ಬಾಕಿ ಇತ್ತು. ಜೂನ್ 1ರಿಂದಲೇ ಅವರು ರಜೆ ಮೇಲಿದ್ದರು. ಅವರಿಗೆ ಸೋಂಕು ತಗುಲಿದ್ದು ಹೇಗೆ ಎಂಬುದು ಗೊತ್ತಾಗಿಲ್ಲ. ಅವರ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಹಾಗೂ ಇತರನ್ನು ಕ್ವಾರಂಟೈನ್ ‌ಮಾಡುವ ಕೆಲಸ‌ ನಡೆದಿದೆ.

ಪೊಲೀಸರಿಗೆ ಹೆಚ್ಚು ಸೋಂಕು ಸಾಧ್ಯತೆ; ನಿಯಂತ್ರಿತ ಪ್ರದೇಶ (ಕಂಟೈನ್‌ಮೆಂಟ್), ಸೀಲ್‌ಡೌನ್‌ ಪ್ರದೇಶ... ಹೀಗೆ ಸೋಂಕು ವ್ಯಾಪಿಸಿರುವ ಪ್ರದೇಶಗಳಲ್ಲಿ ಪೊಲೀಸರು ಹಗಲು ರಾತ್ರಿ ಭದ್ರತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವುದಾಗಿ ಐಸಿಎಂಆರ್ ಇತ್ತೀಚೆಗಷ್ಟೇ ಹೇಳಿದೆ.

ರಾಜ್ಯದಲ್ಲೂ ಈಗಾಗಲೇ ಹಲವು ಪೊಲೀಸರಿಗೆ ಸೋಂಕು ತಗುಲಿದೆ. ಅದರ ಮಧ್ಯೆಯೇ ಎಎಸ್‌ಐ ಸಾವನ್ನಪ್ಪಿರುವುದು ಮತ್ತಷ್ಟು ಆತಂಕವನ್ನುಂಟು ಮಾಡಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವಂತೆ ಹಿರಿಯ ಅಧಿಕಾರಿಗಳು ಪೊಲೀಸರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಯೋಗ ಹಾಗೂ ದೈಹಿಕ ಕಸರತ್ತು ನಡೆಸುವಂತೆಯೂ ತಿಳಿಸಿದ್ದಾರೆ.

‘ಬೆಂಗಳೂರಿನಲ್ಲಿ ಠಾಣೆ ಕರ್ತವ್ಯ, ಭದ್ರತೆ ಹಾಗೂ ಗಸ್ತು ಕರ್ತವ್ಯದಲ್ಲಿದ್ದ ಕೆಲ ಪೊಲೀಸರಿಗೆ ಸೋಂಕು ತಗುಲಿದೆ. ಅವರೆಲ್ಲರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ರೋಗ ಲಕ್ಷಣವೇ ಇಲ್ಲದೇ ಎಎಸ್‌ಐ ಸಾವನ್ನಪ್ಪಿದ್ದು ನಮಗೂ ಆಶ್ಚರ್ಯವನ್ನುಂಟು ಮಾಡಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.