ADVERTISEMENT

ವಿಧಾನಮಂಡಲ ಅಧಿವೇಶನ: ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ–ಜೆಡಿಎಸ್ ಜಂಟಿ ತಂತ್ರ

ಅಧಿವೇಶನದಲ್ಲಿ ಮೈಕ್ರೊ ಫೈನಾನ್ಸ್‌ ಹಾವಳಿ, ಕೆಪಿಎಸ್‌ಸಿ ಹಗರಣಗಳೇ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 22:42 IST
Last Updated 25 ಫೆಬ್ರುವರಿ 2025, 22:42 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಮೈಕ್ರೊ ಫೈನಾನ್ಸ್‌ಗಳ ಹಾವಳಿ, ಕೆಪಿಎಸ್‌ಸಿ ಹಗರಣಗಳನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕುವ ಪ್ರತಿಪಕ್ಷ ಬಿಜೆಪಿ–ಜೆಡಿಎಸ್‌ ನಾಯಕರು ಕಾರ್ಯತಂತ್ರ ರೂಪಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಎರಡೂ ಪಕ್ಷಗಳ ಸಮನ್ವಯ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿದ್ದರು. ಕಲಾಪದಲ್ಲಿ ಕೈಗೆತ್ತಿಕೊಳ್ಳಬಹುದಾದ ವಿಷಯಗಳು, ಸರ್ಕಾರದ ವಿರುದ್ಧ ಸದನದ ಒಳಗೆ, ಹೊರಗೆ ರೂಪಿಸಬಹುದಾದ ಹೋರಾಟಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ADVERTISEMENT

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಆರ್‌. ಅಶೋಕ, ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್‌ಗಳ ಹಾವಳಿ ಮಿತಿಮೀರಿದೆ. ಸಾಲ ಪಡೆದವರ ಸಾವಿನ ಸರಣಿ ಸುಗ್ರೀವಾಜ್ಞೆ ಜಾರಿಗೊಳಿಸಿದ ನಂತರವೂ ನಿಂತಿಲ್ಲ. ಕೋಮು ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮೈಸೂರು ಪ್ರಕರಣ ಇದಕ್ಕೆ ಉದಾಹರಣೆ. ಈ ಕುರಿತು ಎರಡೂ ಸದನಗಳಲ್ಲಿ ಧ್ವನಿ ಎತ್ತಲಾಗುವುದು ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಹಗರಣ ಯುವ ಜನರ ಭವಿಷ್ಯಕ್ಕೆ ಮಾರಕ. ಹಣ ಕೊಟ್ಟು ಹುದ್ದೆ ಪಡೆಯುವ ಕೆಟ್ಟ ಸಂಪ್ರದಾಯಕ್ಕೆ ಸರ್ಕಾರ ನಾಂದಿ ಹಾಡಿದೆ. ಕೆಎಎಸ್‌ ಅಧಿಕಾರಿಗಳಾಗುವ ಕನ್ನಡದ ಪ್ರತಿಭೆಗಳ ಕನಸನ್ನು ಪರೀಕ್ಷಾ ವೈಫಲ್ಯವು ಛಿದ್ರಗೊಳಿಸಿದೆ. ರೈತರ ಆತ್ಮಹತ್ಯೆ, ಬಾಣಂತಿಯರ ಸಾವಿನ ಸರಣಿ ಮುಂದುವರಿದಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಈ ಎಲ್ಲ ವಿಷಯಗಳನ್ನು ಇಟ್ಟುಕೊಂಡು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಬೆಂಗಳೂರು ಏಳು ಚೂರು: ಕುಮಾರಸ್ವಾಮಿ

ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ರಾಜಧಾನಿಯನ್ನು ಏಳು ಚೂರು ಮಾಡಲು ಹೊರಟಿರುವ ರಾಜ್ಯ ಸರ್ಕಾರ, ಕೆಂಪೇಗೌಡರ ಹೆಸರನ್ನು ಸಂ‍ಪೂರ್ಣ ನಾಶ ಮಾಡಲು ಹೊರಟಿದೆ’ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ದೂರಿದರು. ‘ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗಿದೆ. ಮೆಟ್ರೊ ಪ್ರಯಾಣದರ ಹೆಚ್ಚಳವಾಗಿದೆ. ಇಂತಹ ವಿಷಯಗಳ ಕುರಿತು ಎರಡೂ ಪಕ್ಷಗಳ ಶಾಸಕರು ಸದನದಲ್ಲಿ ಧ್ವನಿ ಎತ್ತಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.