ಬೆಂಗಳೂರು:ಡಾ. ಅಂಬೇಡ್ಕರ್ ಸ್ಫೂರ್ತಿಧಾಮ ನೀಡುವ ‘ಬೋಧಿವೃಕ್ಷ ಪ್ರಶಸ್ತಿ’ಗೆ ಚಿಂತಕ ಪ್ರೊ. ಆನಂದ್ ತೇಲ್ತುಂಬ್ಡೆ ಭಾಜನರಾಗಿದ್ದಾರೆ.
2019ರ ಸಾಲಿನ ಪ್ರಶಸ್ತಿಗಳನ್ನು ಟ್ರಸ್ಟ್ ಪ್ರಕಟಿಸಿದೆ. ಬೋಧಿವೃಕ್ಷ ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಫಲಕಗಳನ್ನು ಒಳಗೊಂಡಿದೆ. ಆನಂದ್ ತೇಲ್ತುಂಬ್ಡೆ ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದು, ಸದ್ಯ ಗೋವಾದ ಐಐಎಂನಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ.
ಕವಿ ಕೋಟಿಗಾನಹಳ್ಳಿ ರಾಮಯ್ಯ, ವೈಚಾರಿಕ ಚಿಂತಕ ಪ್ರೊ. ನರೇಂದ್ರ ನಾಯಕ್, ಗಿರಿಜನರ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಪಿರಿಯಾಪಟ್ಟಣ ಅಬ್ಬಳತಿ ಕಾಲೊನಿಯ ಜಾನಕಮ್ಮ, 10 ಸಾವಿರಕ್ಕೂ ಹೆಚ್ಚು ಅನಾಥ ಶವಗಳನ್ನು ಸಂಸ್ಕಾರ ಮಾಡಿರುವ ಬೆಂಗಳೂರಿನ ತ್ರಿವಿಕ್ರಮ ಮಹಾದೇವ, ಮದ್ಯಪಾನದ ವಿರುದ್ಧದ ಹೋರಾಟಗಾರ್ತಿ ಕಲಬುರ್ಗಿ ಜಿಲ್ಲೆಯ ರುಕ್ಮಿಣಿ ಬಾಯಿ ರೋಹಿದಾಸ್ ಕಾಂಬಳೆ ಅವರು ‘ಬೋಧಿವರ್ಧನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ತಲಾ ₹20,000 ನಗದು ಮತ್ತು ಫಲಕಗಳನ್ನು ಒಳಗೊಂಡಿದೆ. ಮಾಗಡಿ ರಸ್ತೆಯಲ್ಲಿನ ಅಂಜನಾನಗರದಲ್ಲಿರುವ ಸ್ಫೂರ್ತಿಧಾಮದಲ್ಲಿ ಇದೇ 14ರಂದು ನಡೆಯಲಿರುವ ‘ಅಂಬೇಡ್ಕರ್ ಹಬ್ಬ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಪ್ರಶಸ್ತಿ ಪುರಸ್ಕೃತರನ್ನು ಅಖಿಲ ಭಾರತ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತಿದೆ. ಅರ್ಜಿ ಆಹ್ವಾನಿಸದೆ ಆಯ್ಕೆ ಸಮಿತಿಯೇ ಅರ್ಹರನ್ನು ಆಯ್ಕೆ ಮಾಡಿದೆ. ಈ ಬಾರಿ ಸಮಿತಿಯಲ್ಲಿ ಸ್ಫೂರ್ತಿಧಾಮದ ಅಧ್ಯಕ್ಷ ಎಸ್.ಮರಿಸ್ವಾಮಿ, ಪತ್ರಕರ್ತ ಇಂದೂಧರ ಹೊನ್ನಾಪುರ, ನವಯಾನ ಸಂಶೋಧನಾ ಕೇಂದ್ರದ ಗೌರವ ನಿರ್ದೇಶಕಿ ಬಿ.ಯು. ಸುಮಾ ಇದ್ದರು ಎಂದು ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.