ಸಾವಳಗಿ (ಬಾಗಲಕೋಟೆ ಜಿಲ್ಲೆ): ತನ್ನ ಮಗಳನ್ನು ಪ್ರೀತಿಸಿ ಮದುವೆಯಾದ ಯುವಕನನ್ನು ಯುವತಿಯ ತಂದೆ ಹಾಗೂ ಮೂವರು ಸೇರಿ ಶನಿವಾರ ತಡರಾತ್ರಿ ಜಮಖಂಡಿ ತಾಲ್ಲೂಕಿನ ಟಕ್ಕೋಡದಲ್ಲಿ ಹತ್ಯೆ ಮಾಡಿದ್ದಾರೆ.
ಜೈನ ಸಮುದಾಯಕ್ಕೆ ಸೇರಿದ ಭುಜಬಲಿ ಕರ್ಜಗಿ (34) ಹತ್ಯೆಯಾದ ಯುವಕ.
ಕ್ಷತ್ರಿಯ ಸಮಾಜದ ತಮ್ಮನಗೌಡ ಪಾಟೀಲರ ಪುತ್ರಿ ಭಾಗ್ಯಶ್ರೀ ಹಾಗೂ ಒಕ್ಕಲುತನ ಮಾಡುತ್ತಿದ್ದ ಭುಜಬಲಿ ಕರ್ಜಗಿ ಪ್ರೀತಿಸುತ್ತಿದ್ದರು. ಎಂಟು ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಗ್ರಾಮಕ್ಕೆ ಬಂದಿರಲಿಲ್ಲ. ಪೊಲೀಸ್ ಠಾಣೆಯಲ್ಲಿ ಎರಡೂ ಮನೆಯವರ ನಡುವೆ ಸಂಧಾನ ನಡೆದ ನಂತರ ಇಬ್ಬರೂ ನಾಲ್ಕು ತಿಂಗಳಿಂದ ಗ್ರಾಮದಲ್ಲಿ ವಾಸಿಸುತ್ತಿದ್ದರು.
‘ಶನಿವಾರ ರಾತ್ರಿ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಮುಗಿಸಿ ಸಹೋದರನ ಪುತ್ರ ಸುಮೇದ್ ಜತೆ ದ್ವಿಚಕ್ರ ವಾಹನದಲ್ಲಿ ಭುಜಬಲಿ ಹೋಗಲು ಸಿದ್ಧರಾಗಿದ್ದಾಗ ಖಾರದಪುಡಿ ಎರಚಲಾಗಿದೆ.ಆಗ ಸುಮೇದ್ ಓಡಿ ಹೋಗಿದ್ದಾರೆ. ಆನಂತರ ಭುಜಬಲಿಯನ್ನು ಕಬ್ಬು ಕಟಾವಿಗೆ ಬಳಸುವ ಹರಿತವಾದ ವಸ್ತುವಿನಿಂದ ಇರಿದು ಕೊಲೆ ಮಾಡಲಾಗಿದೆ’ ಎಂದು ಸಾವಳಗಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ತಮ್ಮನಗೌಡ ಪಾಟೀಲ ಅವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಇನ್ಸ್ಪೆಕ್ಟರ್ ಮನೋಹರ ಕಂಚಗಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.