ADVERTISEMENT

ಬಗರಹುಕುಂ ಸಾಗುವಳಿದಾರರ ಪ್ರತಿಭಟನೆ; ಹಲವರನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 7:21 IST
Last Updated 19 ಆಗಸ್ಟ್ 2019, 7:21 IST
   

ತುಮಕೂರು: ಗುಬ್ವಿ ತಾಲ್ಲೂಕು ಚೇಳೂರು ಸಮೀಪದ ಗಂಗಯ್ತನಪಾಳ್ಯದಲ್ಲಿ ಬಗರಹುಕುಂ ಸಾಗುವಳಿದಾರರನ್ನು ಒಕ್ಕೆಲಿಬ್ಬಿವಿಸಬಾರದು. ಅವರಿಗೆ ಖಾತೆ ಮಾಡಿಕೊಡಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಬಗರಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲ ಸಾಗುವಳಿದಾರರು, ಹೋರಾಟಗಾರರನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ.

ಸುಮಾರು ಆರು ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಬಗರಹುಕುಂ ಸಾಗುವಳಿದಾರರು ಮಾವು, ತೆಂಗು, ಅಡಿಕೆ ಬೆಳೆದಿದ್ದಾರೆ. ಈ ಭೂಮಿ ಅರಣ್ಯ ಇಲಾಖೆ ಸುಪರ್ದಿಗೆ ಪಡೆಯಲು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಕ್ಕೆ ಸಾಗುವಳುದಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇರಳ ಸಂಸದ ಕೆ.ಕೆ.ರಾಘೇಶ್, ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡರಾದ ಜೆ.ಸಿ.ಬೈಯ್ಯಾರೆಡ್ಡಿ, ಯು ಬಸವರಾಜ್, ನವೀನ್ ಕುಮಾರ್, ಯು ಬಸವರಾಜ್, ಬಿ.ಉಮೇಶ್ ನೇತೃತ್ವದಲ್ಲಿಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸುತ್ತಿದ್ದರು.

ADVERTISEMENT

ಐದು ದಶಕಗಳಿಂದ ಉಳಿಮೆ ಮಾಡಿಕೊಂಡು ಬಂದಿರುವ ಸಾಗುವಳಿದಾರರಿಗೆ ಖಾತೆ ಮಾಡಿಕೊಡಬೇಕು. ಮೊದಲು ಕಂದಾಯ ಇಲಾಖೆ ಸೇರಿದ್ದ ಭೂಮಿಯನ್ನು ದಶಕಗಳ ಹಿಂದೆ ಅರಣ್ಯ ಇಲಾಖೆ ತನ್ನದೆಂದು ಹೇಳುತ್ತಿದೆ. ಬಗರಹುಕುಂ ಸಾಗುವಳಿದಾರರಿಗೆ ತೊಂದರೆ ಕೊಡುತ್ತಿದೆ. ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಸಮಕ್ಷಮ ಕುಳಿತು ಬಗೆಹರಿಸಿಕೊಡಬೇಕು. ಯಾವುದೇ ಕಾರಣಕ್ಕೂ ಬಗರಹುಕುಂ ಸಾಗುವಳಿದಾರರಿಗೆ ಅನ್ಯಾಯ ಮಾಡಬಾರದು. ಬೇಡಿಕೆ ಈಡೇರುವ ಭರವಸೆ ಸಿಗುವವರೆಗೂ ಹೋರಾಟ ನಡೆಯುತ್ತದೆ ಎಂದು ಪ್ರತಿಭಟನೆಕಾರರು ಪ್ರತಿಭಟಿಸುತ್ತಿದ್ದರು.

ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆಗೆ ತಡೆಯೊಡ್ಡಿದಾಗ ಪ್ರತಿಭಟನೆಕಾರರು ಆಕ್ಷೇಪ ವ್ಯಕ್ತಪಡಿಸಿದರು. ಮಾತಿನ ಚಕಮಕಿ ನಡೆಯಿತು.

ಕೆಲ ಬಗರಹುಕುಂ ಸಾಗುವಳಿದಾರರನ್ನು, ಪ್ರಾಂತ ರೈತ ಸಂಘಸ ಮುಖಂಡರಾದ ಸಿ ಅಜ್ಜಪ್ಪ, ಸಿ.ಅಶ್ವತ್ಥ್, ನರಸಿಂಹಮೂರ್ತಿ ಸೇರಿದಂತೆ 31 ಜನರನ್ನು ಶಿರಾ ಠಾಣೆಗೆ ಕರೆದೊಯ್ಯಲಾಗಿದೆ. ಅವರು ಈಗ ಶಿರಾ ಠಾಣೆಯಲ್ಲಿದ್ದಾರೆ.

ಚೇಳೂರಿನಲ್ಲಿ ಬಂಧಿಸಿ ಕರೆ ತಂದ ಬಗರಹುಕುಂ ಸಾಗುವಳಿದಾರರನ್ನು ಶಿರಾ ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಿರುವುದು

ಚೇಳೂರು ಠಾಣೆ ಮುಂದೆ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಒತ್ತಾಯ: ಬಂಧಿತರನ್ನು ತಕ್ಷ ಬಿಡುಗಡೆ ಮಾಡಬೇಕು. ಬಗರಹುಕುಂ ಸಾಗುವಳಿದಾರರ ಬೇಡಿಕೆಯನ್ನು ಈಡೇರಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಬಂದು ಮಾತುಕತೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಪೊಲೀಸ್ಅಧಿಕಾರಿಗಳು ಮುಖಂಡರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.