ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿಚಾರಣೆ ನಡೆಸಿ, ವರದಿ ನೀಡಲು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಂಟಿ ಸದನ ಸಮಿತಿಯ ಕಾರ್ಯವ್ಯಾಪ್ತಿಯ ಆದೇಶ ಹೊರಡಿಸಲಾಗಿದೆ.
2013ರಿಂದ ಈವರೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅನುಸರಿಸಿದ ಮಾನದಂಡಗಳು, ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ವಿಧಿಸಲಾಗಿರುವ ಷರತ್ತುಗಳು ಮತ್ತು ಅನುಸರಿಸಿರುವ ಕ್ರಮಗಳ ಬಗ್ಗೆ ವಿಚಾರಣೆ ನಡೆಸಲಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಾಚರಣೆ ಮತ್ತು ಅವುಗಳನ್ನು ನಿರ್ವಹಿಸಿರುವ ವಿವಿಧ ಸಂಘ ಸಂಸ್ಥೆಗಳು/ಗುತ್ತಿಗೆದಾರರನ್ನು ಆಯ್ಕೆ ಮಾಡಿರುವ ವಿಧಾನ ಮತ್ತು ಅವುಗಳ ಕಾರ್ಯವೈಖರಿಯ ಕುರಿತು ಪರಾಮರ್ಶೆ ನಡೆಯಲಿದೆ.
ನೀರಿನ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಹಣ ಖರ್ಚಾಗುತ್ತಿರುವ ಬಗ್ಗೆ ಪರಿಶೀಲಿಸುವುದು. ಈಗ ಕಾರ್ಯಾಚರಣೆಯಲ್ಲಿರುವ, ತಾತ್ಕಾಲಿಕ/ ಶಾಶ್ವತವಾಗಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ವಿವರ, ಸ್ಥಗಿತಗೊಳ್ಳಲು ಕಾರಣವಾಗಿರುವ ಅಂಶಗಳು, ಸುಸ್ಥಿತಿಯಲ್ಲಿಡಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸದನ ಸಮಿತಿ ವಿಚಾರಣೆ ನಡೆಸಲಿದೆ. ಪ್ರಜಾವಾಣಿ ಈ ಅಕ್ರಮದ ಕುರಿತು ವಿಶೇಷ ವರದಿ ಪ್ರಕಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.