ADVERTISEMENT

ಬೆಂಗಳೂರು ಪ್ರೆಸ್‌ ಕ್ಲಬ್‌: ಬಿಎಸ್‌ ಯಡಿಯೂರಪ್ಪ ‘ವರ್ಷದ ವ್ಯಕ್ತಿ’

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಸಚಿವ ಸುಧಾಕರ್‌ಗೆ ವಿಶೇಷ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 17:45 IST
Last Updated 1 ಜನವರಿ 2022, 17:45 IST
ಬಿಎಸ್‌ ಯಡಿಯೂರಪ್ಪ
ಬಿಎಸ್‌ ಯಡಿಯೂರಪ್ಪ    

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬೆಂಗಳೂರು ಪ್ರೆಸ್‌ ಕ್ಲಬ್‌ನ 2021ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಹರೇಕಳ ಹಾಜಬ್ಬ ಮತ್ತು ಕೋವಿಡ್‌ ನಿರ್ವಹಣೆಗಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರಿಗೆ ‘ಪ್ರೆಸ್‌ ಕ್ಲಬ್‌’ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.

ಶನಿವಾರ ನಡೆದ ಕ್ಲಬ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪುರಸ್ಕೃತರನ್ನು ಆಯ್ಕೆಮಾಡಿದ್ದು, ‘ಪ್ರಜಾವಾಣಿ’ಯ ಸುದ್ದಿ ಸಂಪಾದಕ ಜಿ.ಡಿ. ಯತೀಶ್‌ ಕುಮಾರ್‌ ಸೇರಿದಂತೆ 16 ಮಂದಿಯನ್ನು 2021ನೇ ಸಾಲಿನ ‘ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ‘ಪ್ರಜಾವಾಣಿ’ಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಎಂ.ಕೆ. ಭಾಸ್ಕರ್‌ ರಾವ್, ಪದ್ಮರಾಜ ದಂಡಾವತಿ, ರಂಜಾನ್‌ ದರ್ಗಾ ಅವರೂ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ADVERTISEMENT

ಕೆಸ್ತೂರು ಗುಂಡಪ್ಪ ವಾಸುಕಿ, ಡಾ.ಎನ್‌. ಜಗದೀಶ್‌ ಕೊಪ್ಪ, ಬಾಲಸುಬ್ರಮಣ್ಯಂ ಕೆ.ಆರ್‌., ಬಿ.ವಿ. ಶಿವಶಂಕರ, ಸುದರ್ಶನ್‌ ಚನ್ನಂಗಿಹಳ್ಳಿ, ದೊಡ್ಡ ಬೊಮ್ಮಯ್ಯ, ಕೆ.ಎಂ. ವೀರೇಶ್‌, ವಾಸಂತಿ ಹರಿಪ್ರಕಾಶ್‌, ಪ್ರಶಾಂತ್‌ ನಾಥೂ, ಪ್ರಕಾಶ್‌ ಬೆಳವಾಡಿ, ಎಸ್‌.ಎಚ್‌. ಮಾರುತಿ ಮತ್ತು ಭಾನುಪ್ರಕಾಶ್‌ ಚಂದ್ರ ‘ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

‘ಇದೇ 6ರಂದು ಸಂಜೆ ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪುರಸ್ಕೃತರನ್ನುಗೌರವಿಸುವರು. 2020ನೇ ಸಾಲಿನ ಪ್ರೆಸ್‌ ಕ್ಲಬ್‌ ವರ್ಷದ ವ್ಯಕ್ತಿಗೆ ಆಯ್ಕೆ
ಯಾಗಿರುವ ಉದ್ಯಮಿ ಅಜೀಂ ಪ್ರೇಮ್‌ಜಿ, ಚಿತ್ರನಟ ಸುದೀಪ್‌ ಮತ್ತು ಹೃದ್ರೋಗ ತಜ್ಞಡಾ.ದೇವಿಪ್ರಸಾದ್ ಶೆಟ್ಟಿ ಅವರಿಗೆ ವಿಶೇಷ ಪ್ರಶಸ್ತಿ ಮತ್ತು 25 ಪತ್ರಕರ್ತರಿಗೆ ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿಯನ್ನು ಇದೇ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು’ ಎಂದು ಪ್ರೆಸ್ ಕ್ಲಬ್‌ ಅಧ್ಯಕ್ಷ ಕೆ. ಸದಾಶಿವ ಶೆಣೈ ಮತ್ತು ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಕಿರಣ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.