ಕಿಕ್ಕೇರಿ (ಮಂಡ್ಯ): ಸಮೀಪದ ಐಕನಹಳ್ಳಿ ಗ್ರಾಮದ ರೈತ ಅಣ್ಣೇಗೌಡ (58), ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ನಿಂದ ಬಂದಿದ್ದ ನೋಟಿಸ್ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಾಸಲು ಗ್ರಾಮದ ಬ್ಯಾಂಕ್ ಆಫ್ ಬರೋಡದಲ್ಲಿ (ವಿಜಯಾ ಬ್ಯಾಂಕ್) ₹ 1 ಲಕ್ಷ, ಆನೆಗೊಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹ 50 ಸಾವಿರ ಸಾಲವಿತ್ತು. ಖಾಸಗಿ ವ್ಯಕ್ತಿಗಳಿಂದಲೂ ಸಾಲ ಪಡೆದು ನಾಲ್ಕೈದು ಕೊಳವೆಬಾವಿ ತೋಡಿಸಿದ್ದರು. ಬಾವಿಯಲ್ಲಿ ನೀರು ಬಾರದ ಕಾರಣ ಬಹಳ ನೊಂದಿದ್ದರು ಎನ್ನಲಾಗಿದೆ.
ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಹಾಗೂ ಶುಂಠಿ ಬೆಳೆ ನೀರಿಲ್ಲದೆ ಒಣಗಿತ್ತು. ಸಾಲದ ಹೊರೆ ಜಾಸ್ತಿಯಾಗಿ ಸಾಲಗಾರರ ಕಾಟ ಹೆಚ್ಚಾಗಿತ್ತು. ಜೊತೆಗೆ, ಸಾಲ ತೀರಿಸುವಂತೆ ಬ್ಯಾಂಕ್ನಿಂದ ನೋಟಿಸ್ ಬಂದ ಕಾರಣ ಭಯದಿಂದ ಎರಡು ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಪತ್ನಿ ಸುವರ್ಣಾ, ಈ ಕುರಿತು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ, ಅಣ್ಣೇಗೌಡ ಅವರು ಬುಧವಾರ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಒದ್ದಾಡುತ್ತಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.