ಬೆಂಗಳೂರು: ‘ನಮ್ಮ ದೇವರು, ನಮ್ಮ ಹಣ, ನಮ್ಮ ಹಕ್ಕು’ ಆದ್ದರಿಂದ ಹಿಂದು ದೇವಸ್ಥಾನಗಳ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು. ಆಯಾ ದೇವಸ್ಥಾನಗಳ ಮತ್ತು ಭಕ್ತರ ಅನುಕೂಲಕ್ಕಾಗಿಯೇ ಬಳಸಬೇಕು ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಸೋಮವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ದೇವಸ್ಥಾನಗಳನ್ನು ನಿಯಂತ್ರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ದೇವಸ್ಥಾನಗಳ ಹಣವನ್ನು ಮಸೀದಿ, ಚರ್ಚ್ ಇತ್ಯಾದಿಗಳಿಗೆ ಬಳಸಬಾರದು ಎಂದು ಹೇಳಿದರು.
‘ನಮ್ಮ ಭಕ್ತರು ಬೆವರು ಸುರಿಸಿ ದುಡಿದ ಹಣವನ್ನು, ದೇವಸ್ಥಾನದ ಅಭಿವೃದ್ಧಿಗೆಂದು ಭಕ್ತಿಯಿಂದ ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಆ ಹಣವನ್ನು ದೇವಸ್ಥಾನದ ನಿರ್ವಹಣೆ, ಗೋಶಾಲೆ, ಸಂಸ್ಕೃತ ಪಾಠ ಶಾಲೆಗಾಗಿ ಬಳಸಬೇಕು. ಆದರೆ, ಸರ್ಕಾರ ದೇವಸ್ಥಾನದ ಅಭಿವೃದ್ಧಿಗೆ ಹಣ ಬಳಸುತ್ತಿಲ್ಲ ಎಂದು ದೂರಿದರು.
ಸರ್ಕಾರವು ಮಸೀದಿ, ಚರ್ಚ್, ಗುರುದ್ವಾರ, ಬಸದಿಗಳಲ್ಲಿ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗುವ ಹಣವನ್ನು ಏಕೆ ಬಳಸುತ್ತಿಲ್ಲ. ಇದನ್ನು ಪ್ರಶ್ನಿಸುವವರು ಯಾರೂ ಇಲ್ಲ. ಆ ಕಾನೂನು ತೆಗೆದು ಹಾಕಿ, ಅವರ ಹಣವನ್ನೂ ಸರ್ಕಾರದ ಉದ್ದೇಶಕ್ಕೆ ಬಳಸಿ. ವಕ್ಫ್ ಬಳಿ ಲಕ್ಷಗಟ್ಟಲೆ ಎಕರೆ ಆಸ್ತಿ ಇದೆ. ಅದನ್ನು ಸರ್ಕಾರ ಏಕೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದನ್ನು ವಶಕ್ಕೆ ತೆಗೆದುಕೊಂಡು ಕಂದಾಯ ಇಲಾಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.