ಬೆಂಗಳೂರು: ‘ರೈತರ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್ಕಿಟ್’ ಸಿದ್ಧಪಡಿಸಿದ ಪ್ರಕರಣದಲ್ಲಿ ದಿಶಾ ರವಿ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿತ್ತು. ಅಲ್ಲಿನ ಪೊಲೀಸರ ಬಳಿ ಕೆಲವು ಸಾಕ್ಷ್ಯಗಳಿದ್ದವು. ಪ್ರಕರಣ ಈಗ ದೆಹಲಿ ನ್ಯಾಯಾಲಯದಲ್ಲಿದೆ. ಹೀಗಾಗಿ, ಈ ವಿಷಯದಲ್ಲಿ ಹೆಚ್ಚು ಹೇಳಲಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡದೆ ದೆಹಲಿ ಪೊಲೀಸರು ದಿಶಾ ರವಿ ಅವರನ್ನು ಬಂಧಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಬೇರೆ ಬೇರೆ ರೀತಿಯ ಪ್ರಕರಣಗಳಿರುತ್ತವೆ. ಕೆಲವು ಪ್ರಕರಣಗಳಲ್ಲಿ ಶಿಷ್ಟಾಚಾರ ಅನುಸರಿಸುವುದಿಲ್ಲ. ನಮ್ಮ ಪೊಲೀಸರು ಕೂಡಾ ರಾಜ್ಯದ ಹೊರಗೆ ಹೋಗಿ ಹಲವರನ್ನು ಬಂಧಿಸುತ್ತಾರೆ’ ಎಂದು ಸ್ಪಷ್ಟನೆ ನೀಡಿದರು.
ಸಮಾವೇಶಕ್ಕೆ ಭದ್ರತೆ: ‘ಅರಮನೆ ಮೈದಾನದಲ್ಲಿ ಇದೇ 21ರಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಪಂಚಮಸಾಲಿ ಸಮಾವೇಶದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಪೊಲೀಸರು ಭದ್ರತೆ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
‘ಒಂದೂವರೆ ವರ್ಷದಿಂದ ಹಲವು ಹೋರಾಟಗಳು ನಡೆದಿವೆ. ಇಂಥ ಹೋರಾಟಗಳ ಸಂದರ್ಭದಲ್ಲಿ ಸಮಸ್ಯೆ ಆಗದಂತೆ ನಮ್ಮ ಪೊಲೀಸರು ನಿಭಾಯಿಸಿದ್ದಾರೆ. ಈಗಲೂ ದಕ್ಷತೆಯಿಂದ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.