ADVERTISEMENT

12ರ ನಂತರ ಬಿಜೆಪಿಯಿಂದ ಕಾವೇರಿ ಯಾತ್ರೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 14:06 IST
Last Updated 8 ಸೆಪ್ಟೆಂಬರ್ 2023, 14:06 IST
ಶಾಸಕ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮುಖಂಡರ ತಂಡ ಕೆಆರ್‌ಎಸ್‌ ಜಲಾಶಯ ವೀಕ್ಷಣೆಗೆ ತೆರಳಿತು
ಶಾಸಕ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮುಖಂಡರ ತಂಡ ಕೆಆರ್‌ಎಸ್‌ ಜಲಾಶಯ ವೀಕ್ಷಣೆಗೆ ತೆರಳಿತು   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಕುಡಿಯುವ ನೀರಿಗೂ ತೊಂದರೆ ಇರುವಾಗ ತಮಿಳುನಾಡಿಗೆ ನೀರು ಹರಿಸಿ ಜನರಿಗೆ ದ್ರೋಹ ಬಗೆದಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿಯಿಂದ ಇದೇ 12ರ ನಂತರ ಕಾವೇರಿ ಕೊಳ್ಳದಲ್ಲಿ ಕಾವೇರಿ ಯಾತ್ರೆ ನಡೆಸಲಾಗುವುದು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಜೆಪಿ ನಿಯೋಗದೊಂದಿಗೆ ಶುಕ್ರವಾರ ಕೆಆರ್‌ಎಸ್‌ ಜಲಾಶಯ ವೀಕ್ಷಿಸಿದ ‌ಅವರು, ‘ನ್ಯಾಯಾಲಯ ಆದೇಶಿಸ‌ದಿದ್ದರೂ ತಮಿಳುನಾಡಿಗೆ ನೀರು ಹರಿಸಿ ರಾಜ್ಯದಲ್ಲಿ ಕೃತಕ ಬರ ಸೃಷ್ಟಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ವಾಸ್ತವ ಸಂಗತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಸ್ಥಿತಿ ನಿಭಾಯಿಸಲು ವಿಫಲರಾಗಿರುವ ಸಚಿವ ಡಿ.ಕೆ. ಶಿವಕುಮಾರ್‌ ರೈತರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘12ರ ನಂತರ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿರುವ ಸರ್ಕಾರ ಆ ನಿಲುವಿಗೇ ಬದ್ಧವಾ‌ಗದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಸಂಸದರಿಗೂ ಸೂಚಿಸಲಾಗಿದೆ. ಸಂಕಷ್ಟ ಸೂತ್ರ ರಚನೆ, ಮೇಕೆದಾಟು ಯೋಜನೆ ಜಾರಿಗೂ ಹೋರಾಟ ನಡೆಯಲಿದೆ’ ಎಂದರು.

ADVERTISEMENT

‘ಕಾವೇರಿ ಕೊಳ್ಳದ ಜಲಾಶಯಗಳ ನಿರ್ವಹಣೆಯಲ್ಲಿ ಸರ್ಕಾರ ಜವಾಬ್ದಾರಿ ಮರೆತಿದೆ. ಜೂನ್‌ ತಿಂಗಳಲ್ಲೇ ಮಳೆ ಕೊರತೆಯ ಮಾಹಿತಿ ಇದ್ದರೂ ಕೆರೆ, ಕಟ್ಟೆ ತುಂಬಿಸಿಲ್ಲ. ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿಸಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ನೀರು ಬಿಟ್ಟಿದ್ದರೆ ಹೆಚ್ಚಿನ ನೀರು ಉಳಿಸಬಹುದಿತ್ತು. ವಾಸ್ತವಾಂಶ ಮರೆಮಾಚಿ ನೀರು ಹರಿಸಲಾಗಿದೆ’ ಎಂದರು.

‘ತಮಿಳುನಾಡಿನಲ್ಲಿ ವಾಸ್ತವವಾಗಿ 1.8 ಲಕ್ಷ ಎಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆಯಬೇಕು, ಆದರೆ ಅನಧಿಕೃತವಾಗಿ 4 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲಾಗಿದೆ. ಈ ವಾಸ್ತವಾಂಶವನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ಸೋತಿದೆ. ಕೆಆರ್‌ಎಸ್‌ ಜಲಾಶಯದಲ್ಲಿ ನೀರು ತಗ್ಗಿರುವುದನ್ನು ನೋಡಿದರೆ ಹೊಟ್ಟೆ ಉರಿಯುತ್ತಿದೆ’ ಎಂದರು.

ನಿಯೋಗದಲ್ಲಿ ಗೋವಿಂದ ಕಾರಜೋಳ, ಸಂಸದರಾದ ಸುಮಲತಾ ಅಂಬರೀಶ್‌, ಪ್ರತಾಪ್‌ಸಿಂಹ, ಶಾಸಕ ಶ್ರೀವತ್ಸ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.