ADVERTISEMENT

ಜಾಹೀರಾತು ನೀತಿ ಪ್ರಮಾಣಪತ್ರ ಸಲ್ಲಿಸಲು ಸಮಯ ಕೇಳಿದ ಬಿಬಿಎಂಪಿ; ಹೈಕೋರ್ಟ್ ಗರಂ

ಅಧಿಕಾರಿಗಳು ಸಂಬಳ ತಗೋಳೋದಿಲ್ವಾ? ನ್ಯಾಯಮೂರ್ತಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2018, 8:53 IST
Last Updated 14 ಆಗಸ್ಟ್ 2018, 8:53 IST
   

ಬೆಂಗಳೂರು: ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಲು ಇನ್ನೂ ಎರಡು ದಿನ ಸಮಯಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿಗೆ ಹೈಕೋರ್ಟ್ ಮತ್ತೆ ಗರಂ ಆಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವಿಗೆ ಸಂಬಂಧಿಸಿದ ಪಿಐಎಲ್‌ಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ಮುಂದುವರಿಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ‌.ಶ್ರೀನಿಧಿ ಪ್ರಮಾಣ ಪತ್ರ ಮೂಲಕ ಜಾಹೀರಾತು ನೀತಿಯ ಕರಡು ಸಲ್ಲಿಸಿದರು‌.

ADVERTISEMENT

ತಜ್ಞರು, ವಿವಿಧ ಇಲಾಖೆಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷ ಭಾಗಿಯಾದವರ ಜೊತೆ ಚರ್ಚಿಸಿ ನಿಯಮ ರೂಪಿಸಲಾಗುವುದು ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾಹೇಶ್ವರಿ ಗುಡುಗಿದರು.

ಒಂದು ಕೌನ್ಸಿಲ್ ಸಭೆ ನಡೆಸುವುದಕ್ಕೂ ನಾವೇ ಆದೇಶ ಮಾಡಬೇಕಾ? ನಿಮ್ಮ ಕೆಲಸ ಮಾಡೋದಕ್ಕೂ ನಾವೇ ಹೇಳಬೇಕಾ? ಅಧಿಕಾರಿಗಳು ಸಂಬಳ ತಗೋಳೋದಿಲ್ವಾ? ಅಧಿಕಾರಿಗಳ ಇಂತಹ ವರ್ತನೆ ಸಹಿಸೋದಿಲ್ಲ. ಫಲಕಗಳನ್ನು ತೆರವುಗೊಳಿಸಲು ನೀಡಿರುವ ಈ ತಿಂಗಳ ಅಂತ್ಯದ ಕಡೆಯ ಅವಕಾಶದಲ್ಲಿಕಿಂಚಿತ್ತೂ ವಿನಾಯಿತಿನೀಡುವುದಿಲ್ಲ

ಬಿಬಿಎಂಪಿ ಅಧಿಕಾರಿಗಳ ಮೇಲಿನ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 13ರಿಂದ ವಿಚಾರಣೆ ಆರಂಭವಾಗಿದ್ದು, ಇದೇ 18ಕ್ಕೆ ಮುಂದೂಡಲಾಗಿದೆ" ಎಂದು ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೂ ಗರಂ ಆದ ಮುಖ್ಯ ನ್ಯಾಯಮೂರ್ತಿಗಳು,"ಇವೆಲ್ಲಾ ದಿನನಿತ್ಯದ ವಿಚಾರಣೆ ಆಧಾರದಲ್ಲಿ ನಡೆಯಬೇಕು ಎಂದು ಹೇಳಿರಲಿಲ್ಲವೇ" ಎಂದು ಕಿಡಿ‌ಕಾರಿದರು. ಇದಕ್ಕೆ ಚಂದ್ರಮೌಳಿ, "ಇನ್ನೂ ಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ" ಎಂದಾಗ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಶೀಘ್ರ ವಿಚಾರಣೆ ನಡೆಸಿ. ಇದೇ 14ರೊಳಗೆ ಎಲ್ಲಾ ಪ್ರಕರಣಗಳಲ್ಲಿ ಆರೋಪಪಟ್ಟಿಸಲ್ಲಿಸಿ ಎಂದು ತಾಕೀತು ಮಾಡಿದರು.

223 ಕೇಸುಗಳಲ್ಲಿ 200ಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಲಾಗಿದೆ. 23 ಪ್ರಕರಣಗಳಲ್ಲಿ ಆರೋಪಿಗಳ ಫೋನ್ ನಂಬರ್ ಬಿಟ್ಟರೆ ಬೇರೆ ಮಾಹಿತಿ ಸಿಕ್ಕಿಲ್ಲ. ಆ ನಂಬರ್ಗಳೂ ಸ್ವಿಚ್ಡ್ ಆಫ್ ಆಗಿವೆ. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಇಂದು ಸಂಜೆಯೊಳಗೆ ಆರೋಪಿಗಳನ್ನು ಬಂಧಿಸಲು ಕ್ರಮಕೈಗೊಳ್ಳಲಾಗುವುದು. ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ‌ ಎಂದುಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ನ್ಯಾಯ ಪೀಠಕ್ಕೆ ತಿಳಿಸಿದರು.

"ತೆರವುಗೊಳಿಸಿರುವ ಫ್ಲೆಕ್ಸ್ ಹಾಗೂ ಬ್ಯಾನರ್ಗಳ ವಿಲೇವಾರಿಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟವಾಗಿ ನಿಖರವಾಗಿ ತಿಳಿಸಿ. ಉತ್ತಮ ಪ್ರಮಾಣಪತ್ರ ಸಲ್ಲಿಸಿ" ಎಂದು ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.