ಬೆಂಗಳೂರು: ‘ಕಾವೇರಿಯಿಂದ ಗೋದಾವರಿಯವರೆಗೂ ಕನ್ನಡದ ನೆಲ ವ್ಯಾಪಿಸಿತ್ತು ಎಂದು ಕವಿರಾಜಮಾರ್ಗ ಹೇಳುತ್ತದೆ. ಅದು ಇಂದಿನ ನಾಸಿಕ್.ಹೀಗಾಗಿ ಮಹಾರಾಷ್ಟ್ರವು ಬೆಳಗಾವಿಗಾಗಿ ಗಡಿ ತಂಟೆ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ಹಿರಿಯಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟರು.
ನಗರದಲ್ಲಿ ಗುರುವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ2019ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2018ನೇ ಸಾಲಿನ ಪುಸ್ತಕ ಬಹುಮಾನ ವಿತರಿಸಿ ಮಾತನಾಡಿದ ಅವರು, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ಧರಾಮಸ್ವಾಮಿಗಳಂತಹವರು ಬೆಳಗಾವಿಯಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಅಂತವರ ಕೆಲಸಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕಿದೆ ಎಂದರು.
‘ವಿಜ್ಞಾನಿಯಾಗಬೇಕಿದ್ದ ನಾನು ಕುವೆಂಪು ಅವರ ಪ್ರೇರಣೆಯಿಂದಲೇ ಸಾಹಿತ್ಯದ ಶೋಧಕನಾಗುವಂತಾಯಿತು. ಅವರ ಶಿಷ್ಯನಾಗುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’ ಎಂದರು.
ಅನುವಾದ ಕೋರ್ಸ್: ಪ್ರಾಧಿಕಾರದ ವತಿಯಿಂದ ಉದ್ಯೋಗ ಸಂಬಂಧಿ ಅನುವಾದ ಕೋರ್ಸ್ ಆರಂಭಿಸುವ ಚಿಂತನೆ ಇದೆ, ಕನ್ನಡದ ಮುಖ್ಯ ಕೃತಿಗಳನ್ನು ಇತರ ಭಾಷೆಗಳಿಗೆ ಅನುವಾದಿಸಿ, ಡಿಜಿಟಲ್ ರೂಪದಲ್ಲಿ ನೀಡುವುದು ಸಹಿತ ಹಲವು ಯೋಜನೆಗಳಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ್ ಭಟ್ ಹೇಳಿದರು.
ಗೌರವ ಪ್ರಶಸ್ತಿ ತಲಾ ₹ 50 ಸಾವಿರ ಹಾಗೂ ಪುಸ್ತಕ ಬಹುಮಾನ ತಲಾ ₹ 25 ಸಾವಿರ ಒಳಗೊಂಡಿದೆ.ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ ಕು.ಮಿರ್ಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.