ADVERTISEMENT

ಉಪಚುನಾವಣೆ: ಮತದಾನದ ಉತ್ಸಾಹ ಕಸಿದ ಬಿಸಿಲು

ಬೆಳಗಾವಿ ಲೋಕಸಭೆ ಕ್ಷೇತ್ರ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 21:48 IST
Last Updated 17 ಏಪ್ರಿಲ್ 2021, 21:48 IST
   

ರಾಯಚೂರು/ಬೀದರ್‌: ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭಾ ಉಪ ಚುನಾವಣೆಯ ಮಸ್ಕಿ ಕ್ಷೇತ್ರದಲ್ಲಿ ಉತ್ತಮ ಮತದಾನವಾದರೆ, ಬಸವಕಲ್ಯಾಣದಲ್ಲಿ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಸಿಲಿನಿಂದಾಗಿ ಎರಡೂ ಕಡೆಗಳಲ್ಲಿ ಸಂಜೆ ನಂತರವೇ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬಂದರು.

ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು ತುರ್ವಿಹಾಳ ಪಟ್ಟಣದಲ್ಲಿ, 'ಹೋಮ್‌ ಐಸೋಲೇಷನ್‌‘ ನಲ್ಲಿರುವ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಸುರಕ್ಷತಾ ಸಾಧನ ಧರಿಸಿ ಹಕ್ಕು ಚಲಾಯಿಸಿದರು.

ಹಾಲಾಪುರ ಮತ್ತು ವಟಗಲ್‌ ಗ್ರಾಮಗಳ ಮತಗಟ್ಟೆಗಳಲ್ಲಿ ಚುನಾವಣಾ ನಿಯಮ ಉಲ್ಲಂಘನೆ ಕುರಿತು ಪ್ರಕರಣ ದಾಖಲಿಸಲು ಚುನಾವಣಾಧಿಕಾರಿ ಸೂಚಿಸಿದರು. ಮಸ್ಕಿ ಕ್ಷೇತ್ರದ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು ಎನ್‌ಆರ್‌ಬಿಸಿ 5ಎ ಕಾಲುವೆಗಾಗಿ 115 ದಿನಗಳಿಂದ ಹೋರಾಟ ನಡೆಸಿದ್ದು, ಇಲ್ಲಿ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ADVERTISEMENT

ಬಸವಕಲ್ಯಾಣ ಕ್ಷೇತ್ರದ ತ್ರಿಪುರಾಂತ ಗ್ರಾಮದಲ್ಲಿ ಹಣ ಹಂಚಿಕೆ ಆರೋಪ ಕೇಳಿ ಬಂದ ನಂತರ ಮತಗಗಟ್ಟೆಗಳ ವ್ಯಾಪ್ತಿಯಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿತ್ತು. ಜಿಲ್ಲಾ ಚುನಾವಣಾ ಆಧಿಕಾರಿ ರಾಮಚಂದ್ರನ್‌ ಅವರುಅಧಿಕಾರಿಗಳ ತಂಡದೊಂದಿಗೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್, ಬಿಜೆಪಿ ಅಭ್ಯರ್ಥಿ ಶರಣು ಸಲಗರ, ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಬಸವಕಲ್ಯಾಣದಲ್ಲಿ ಮತ ಚಲಾಯಿಸಿದರು.

ಮತಚಲಾವಣೆ ವಿಡಿಯೊ ಮಾಡಿದ: ಮಸ್ಕಿ ಕ್ಷೇತ್ರದ ವಟಗಲ್‌ ಗ್ರಾಮದಲ್ಲಿ ಮತದಾನ ಮಾಡಿದ್ದನ್ನು ಪಂಚಾಯಿತಿ ಸದಸ್ಯ ಬಸವರಾಜ ಚಲುವಾದಿ ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇವರ ವಿರುದ್ಧ ಕವಿತಾಳ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಕೋವಿಡ್‌ ನಿಯಮ ಪಾಲನೆ: ಮತಗಟ್ಟೆ ಆವರಣಗಳಲ್ಲಿ ಕೋವಿಡ್‌ ನಿಯಮ ಪಾಲನೆಗೆ ಕ್ರಮ ಕೈಗೊಳ್ಳಲಾಗಿತ್ತು. ಕೆಲವೆಡೆ ಅಂತರ ಕಾಣಲಿಲ್ಲ. ಎಲ್ಲರೂ ಮಾಸ್ಕ್‌ ಧರಿಸಿದ್ದರು. ಮತದಾರರಿಗೆ ಥರ್ಮಲ್‌ ಪರೀಕ್ಷೆ ನಡೆಯಿತು.

ನೀರಸ ಮತದಾನ

ಬೆಳಗಾವಿ: ಲೋಕಸಭೆ ಕ್ಷೇತ್ರದ ಚುನಾವಣೆಗೆ 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬಹುತೇಕ ಮತಗಟ್ಟೆಗಳಲ್ಲಿ ನೀರಸ ಮತದಾನ ನಡೆಯಿತು.

ಬಿಜೆಪಿಯ ಮಂಗಲಾ ಸುರೇಶ ಅಂಗಡಿ ನಗರದಲ್ಲಿ ಹಾಗೂ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಗೋಕಾಕದಲ್ಲಿ ಮತ ಚಲಾಯಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್‌ನಿಂದ ಚೇತರಿಸಿಕೊಂಡಿರುವ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಚುನಾವಣೆಗೆ ಎರಡು ದಿನಗಳ ಹಿಂದೆಯೇ ಅಂಚೆ ಮತಪತ್ರದ ಮೂಲಕ ಹಕ್ಕು ಚಲಾಯಿಸಿದ್ದರು. ಅವರ ಪುತ್ರ, ಕೆಎಂಎಫ್‌ ನಿರ್ದೇಶಕ ಅಮರನಾಥ ಜಾರಕಿಹೊಳಿ, ಕೋವಿಡ್ ದೃಢಪಟ್ಟಿದ್ದರಿಂದ ಪಿಪಿಇ ಕಿಟ್‌ ಧರಿಸಿ ಬಂದು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.