ADVERTISEMENT

ಮಹಾರಾಷ್ಟ್ರಕ್ಕೆ ಬಸ್‌ ಸಂಚಾರ ಆರಂಭ

ಗಡಿ ವಿವಾದ: ಬಸ್‌ ನಿಲ್ದಾಣದಲ್ಲಿ ಪೊಲೀಸ್‌ ಭದ್ರತೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 17:55 IST
Last Updated 8 ಡಿಸೆಂಬರ್ 2022, 17:55 IST
ಬೆಳಗಾವಿಯಿಂದ ಮುಂಬೈಗೆ ಸಂಚರಿಸಿದ ಕೆಎಸ್‌ಆರ್‌ಟಿಸಿ ಬಸ್‌
ಬೆಳಗಾವಿಯಿಂದ ಮುಂಬೈಗೆ ಸಂಚರಿಸಿದ ಕೆಎಸ್‌ಆರ್‌ಟಿಸಿ ಬಸ್‌   

ಬೆಳಗಾವಿ: ರಾಜ್ಯದಿಂದ ಮಹಾರಾಷ್ಟ್ರದ ವಿವಿಧ ನಗರ, ಪಟ್ಟಣಗಳಿಗೆ ಗುರುವಾರ ಬಸ್‌ ಸಂಚಾರ ಆರಂಭಗೊಂಡಿದೆ. ‌

‘ಬೆಳಗಾವಿ ಸೇರಿ ವಿವಿಧ ವಿಭಾಗಗಳ ಬಸ್‌ಗಳು ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಿಂದ ಕೊಲ್ಹಾಪುರ, ನಾಸಿಕ್‌, ಮುಂಬೈ, ಪುಣೆ ಮತ್ತಿತರ ನಗರಗಳಿಗೆ ಸಂಚರಿಸುತ್ತಿವೆ. ಕೊಲ್ಹಾಪುರ ನಗರದೊಳಗೆ ಬಸ್‌ಗಳನ್ನು ಬಿಟ್ಟಿಲ್ಲ. ಅಲ್ಲಿನ ಬೈಪಾಸ್‌ವರೆಗಷ್ಟೇ ಹೋಗುತ್ತಿವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕರ್ನಾಟಕಕ್ಕೆ ಬಸ್‌ ಸೇವೆ ಆರಂಭಿಸಿಲ್ಲ’ ಎಂದು ಎನ್‌ಡಬ್ಲ್ಯುಕೆಎಸ್ಆರ್‌ಟಿಸಿ ಬೆಳಗಾವಿವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವೈ. ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಗಡಿ ವಿವಾದ ತಾರಕಕ್ಕೇರಿದ ಕಾರಣ,ಬುಧವಾರ ಬೆಳಿಗ್ಗೆಯಿಂದ ಕರ್ನಾಟಕ–ಮಹಾರಾಷ್ಟ್ರ ಮಧ್ಯೆ ಬಸ್‌ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.ಆದರೆ, ಬಸ್‌ ಸಂಚಾರ ಪುನರಾರಂಭ
ವಾದ ಕಾರಣ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಬಸ್‌ ನಿಲ್ದಾಣದಲ್ಲಿ ಪೊಲೀಸ್‌ ಭದ್ರತೆ ಮುಂದುವರಿಸಲಾಗಿದೆ.

ADVERTISEMENT

ಗ್ರಾ.ಪಂ. ವಿಸರ್ಜನೆ ಬೆದರಿಕೆ: ಪ್ರತಿರೋಧ

ವಿಜಯಪುರ: ‘ಮೂಲಸೌಕರ್ಯ ಕಲ್ಪಿಸದಿದ್ದರೆ ಕರ್ನಾಟಕ ಸೇರುತ್ತೇವೆ’ ಎಂದು ಠರಾವು ಪಾಸು ಮಾಡಿರುವ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳನ್ನು ವಿಸರ್ಜನೆ ಮಾಡುವುದಾಗಿ,ಗ್ರಾಮ ಪಂಚಾಯಿತಿ ನೌಕರರನ್ನು ಸೇವೆಯಿಂದ ವಜಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರ ಸರ್ಕಾರದ ಎಚ್ಚರಿಕೆಗೆ ಬಗ್ಗದ ಗಡಿನಾಡ ಕನ್ನಡಿಗರು ಈ ಸಂಬಂಧ ಅಕ್ಕಲಕೋಟ ತಾಲ್ಲೂಕಿನ ತಡವಳದಲ್ಲಿ ಗುರುವಾರ ಸಭೆ ನಡೆಸಿ, ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

‘ಗ್ರಾಮ ಪಂಚಾಯಿತಿಗಳನ್ನು ವಿಸರ್ಜನೆ ಮಾಡಿದರೂ, ನೌಕರರನ್ನು ಸೇವೆಯಿಂದ ವಜಾ ಮಾಡಿದರೂ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಗಲ್ಲು ಶಿಕ್ಷೆ ನೀಡಿದರೂ ಹೆದರುವುದಿಲ್ಲ. ಮೊದಲು ಮೂಲ ಸೌಕರ್ಯ ಕಲ್ಪಿಸಿ. ಅದು ನಮ್ಮ ಹಕ್ಕಾಗಿದೆ’ ಎಂದು ಹೇಳಿದ್ದಾರೆ.

‘2002ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ 22 ಗ್ರಾಮಗಳ ಜನರು
ಮೂಲ ಸೌಕರ್ಯ ನೀಡಿ ಇಲ್ಲವೇ, ಮಹಾರಾಷ್ಟ್ರಕ್ಕೆ ಸೇರುತ್ತೇವೆ ಎಂದು ನಿರ್ಧರಿಸಿ
ದ್ದರು.ಅಂದಿನ ಕರ್ನಾಟಕ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸರ್ಕಾರ ₹ 204
ಕೋಟಿ ಅನುದಾನ ನೀಡಿ, ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದರು. ಅದೇ
ಮಾದರಿಯಲ್ಲೇ ಮಹಾರಾಷ್ಟ್ರ ಸರ್ಕಾರ ನಮ್ಮ ಭಾಗದ ಹಳ್ಳಿಗಳಿಗೆ ಮೂಲ
ಸೌಕರ್ಯ ಒದಗಿಸಲು ಅಗತ್ಯ ಅನುದಾನ ಒದಗಿಸಬೇಕು’ ಎಂದು ಅಕ್ಕಲಕೋಟ ತಾಲ್ಲೂಕಿನ ಕನ್ನಡಿಗರು ಸಭೆ ನಡೆಸಿ, ಮಹಾರಾಷ್ಟ್ರ ಸರ್ಕಾರವನ್ನು
ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.