ADVERTISEMENT

ಸಚಿವ ಪಾಟೀಲ ವಿರುದ್ಧ ರಮೇಶ್‌ ಕುಮಾರ್ ಅಸಮಾಧಾನ

ವೈದ್ಯಕೀಯ ಮಸೂದೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 20:02 IST
Last Updated 13 ಡಿಸೆಂಬರ್ 2018, 20:02 IST

ಬೆಳಗಾವಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಬಗ್ಗೆ ಉತ್ತರ ನೀಡಲು ಆರೋಗ್ಯ ಸಚಿವ ಶಿವಾನಂದ ಪಾಟೀಲ ಸಿದ್ಧರಾಗಿಲ್ಲ. ಇಲಾಖೆಯ ಅಧಿಕಾರಿಗಳು ಸಚಿವರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಸ್‌.ಎ.ರಾಮದಾಸ್‌ ಅವರು ಪ್ರಶ್ನೆ ಕೇಳಿದರು. ’ಕಾಯ್ದೆಯ ಮೂಲ ನಿಯಮಗಳಿಗೆ ತಿದ್ದುಪಡಿಗಳನ್ನು ತರಲಾಗಿದೆ. ಮೂರು ತಜ್ಞರ ಸಮಿತಿಗಳನ್ನು ರಚಿಸಲಾಗುತ್ತಿದೆ. ಈ ಸಮಿತಿ ರಚನೆ ಬಳಿಕ ತಿದ್ದುಪಡಿಗಳನ್ನು ಅನುಷ್ಠಾನ ಮಾಡಲಾಗುತ್ತದೆ‘ ಎಂದು ಶಿವಾನಂದ ಪಾಟೀಲ ಉತ್ತರಿಸಿದರು. ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ’ಮಸೂದೆಗೆ ಸದನವೇ ಒಪ್ಪಿಗೆ ನೀಡಿದೆ. ಈಗ ತಿದ್ದುಪಡಿಯ ಅಗತ್ಯ ಏನಿದೆ. ನಮ್ಮ ಸದನಕ್ಕಿಂತ ನೀವು ಶ್ರೇಷ್ಠರಾ‘ ಎಂದು ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿದ ರಮೇಶ್‌ ಕುಮಾರ್‌, ’ಸಾಮಾನ್ಯ ಜನರಿಗೆ ಹಾಗೂ ಮುಖ್ಯಮಂತ್ರಿಗೆ ಒಂದೇ ರೀತಿಯ ಚಿಕಿತ್ಸೆ ಸಿಗಬೇಕು ಎಂಬ ಕಾರಣಕ್ಕೆ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಯಿತು. ಶಾಸಕರು ಚಿಕಿತ್ಸೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದರೆ, ಈ ಯೋಜನೆಗೆ ತಿದ್ದುಪಡಿ ತರಲು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ವಿಳಂಬ ಮಾಡುತ್ತಿದೆ‘ ಎಂದು ಕಿಡಿಕಾರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.