ಬೆಂಗಳೂರು: ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಕಡೂರು ಶಾಸಕ ಕೆ.ಎಸ್. ಬೆಳ್ಳಿ ಪ್ರಕಾಶ್ ಮತ್ತು ಉಪಾಧ್ಯಕ್ಷರಾಗಿ ಮೈಸೂರಿನ ಶಾಸಕ ಜಿ.ಟಿ. ದೇವೇಗೌಡರ ಮಗ ಜಿ.ಡಿ. ಹರೀಶ್ ಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
19 ನಿರ್ದೇಶಕರನ್ನು ಒಳಗೊಂಡಿರುವ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಬೆಳ್ಳಿ ಪ್ರಕಾಶ್ ಮತ್ತು ಹರೀಶ್ ಗೌಡ ಮಾತ್ರ ನಾಮಪತ್ರ ಸಲ್ಲಿಸಿದರು. ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅನಿಲ್ಕುಮಾರ್ ಘೋಷಿಸಿದರು.
ಹಿಂದಿನ ಅವಧಿಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅಧ್ಯಕ್ಷರಾಗಿದ್ದು, ಬಳ್ಳಾರಿಯ ಚಂದ್ರಶೇಖರ್ ಉಪಾಧ್ಯಕ್ಷರಾಗಿದ್ದರು. ಆಡಳಿತ ಮಂಡಳಿ ಸದಸ್ಯರ ಅಧಿಕಾರದ ಅವಧಿ 2020ರ ಜುಲೈನಲ್ಲಿ ಅಂತ್ಯಗೊಂಡಿತ್ತು. ಆ ಬಳಿಕ ಬೆಂಗಳೂರು ಪ್ರಾದೇಶಿಕ ಆಯುಕ್ತರು ಅಪೆಕ್ಸ್ ಬ್ಯಾಂಕ್ನ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬೆಳ್ಳಿಪ್ರಕಾಶ್ ಮತ್ತು ಹರೀಶ್ ಗೌಡ ಮಂಗಳವಾರವೇ ಅಧಿಕಾರ ಸ್ವೀಕರಿಸಿದ್ದರು, ಮುಂದಿನ ಐದು ವರ್ಷಗಳ ಅವಧಿಗೆ ಬ್ಯಾಂಕ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.