ವಿಶೇಷ ಪೀಠ ರಚಿಸಲು ಸುಪ್ರೀಂ ನಿರ್ದೇಶನ
ನವದೆಹಲಿ: ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು ಮೂರು ವಾರಗಳಲ್ಲಿ ಪೂರ್ಣಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಈ ವರ್ಷ ಫೆಬ್ರುವರಿ 2ರಂದು ನಿಗದಿಯಾಗಿದ್ದ ಚುನಾವಣೆಯನ್ನು ಸಂಘವು ಕಳೆದ ವಾರ ರದ್ದುಗೊಳಿಸಿತ್ತು. ಸಂಘದ ಖಜಾಂಚಿ ಹುದ್ದೆಯನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೂಚಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ, ‘ಖಜಾಂಚಿ ಹುದ್ದೆಗೆ ನಾಮಪತ್ರ ಸಲ್ಲಿಸಿದ ಪುರುಷ ಅಭ್ಯರ್ಥಿಗಳಿಗೆ ಅದನ್ನು ಬೇರೆ ಯಾವುದೇ ಹುದ್ದೆಗೆ ಬದಲಾಯಿಸಲು ಒಂದು ಅವಕಾಶ ನೀಡಲಾಗುವುದು ಎಂದು ಹೇಳಿತು. ಮಹಿಳಾ ಅಭ್ಯರ್ಥಿ ಹುದ್ದೆಗಳಿಗೆ ವಾರದೊಳಗೆ ನಾಮಪತ್ರಗಳನ್ನು ಆಹ್ವಾನಿಸಬೇಕು ಎಂದೂ ಸೂಚಿಸಿತು.
‘ಬೆಂಗಳೂರು ವಕೀಲರ ಸಂಘದ ಹಾಲಿ ಪದಾಧಿಕಾರಿಗಳ ಅಧಿಕಾರಾವಧಿ 2024ರ ಡಿಸೆಂಬರ್ 19ರಂದು ಕೊನೆಗೊಂಡಿದೆ. 2025ರ ಜನವರಿ ಅಥವಾ ಫೆಬ್ರುವರಿಯಲ್ಲಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಈ ಕಾರಣದಿಂದ ಮಹಿಳೆಯರಿಗೆ ಶೇ 33ರಷ್ಟು ಮೀಸಲು ನಿಗದಿಪಡಿಸುವಂತೆ ಬೆಂಗಳೂರು ವಕೀಲರ ಸಂಘ ಸೇರಿದಂತೆ ಅರ್ಜಿಯಲ್ಲಿ ಕಾಣಿಸಲಾಗಿರುವ ಇತರೆ ಪ್ರತಿವಾದಿಗಳಿಗೆ ನಾವು 2024ರ ಡಿಸೆಂಬರ್ 23ರಂದು ಮನವಿ ಸಲ್ಲಿಸಿದ್ದೆವು’ ಎಂದು ಹೈಕೋರ್ಟ್ ವಕೀಲೆ ದೀಕ್ಷಾ ಎನ್.ಅಮೃತೇಶ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
‘ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಮುಂಬರುವ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಆಯ್ಕೆಯ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ 33ರಷ್ಟು ಮೀಸಲು ಕಲ್ಪಿಸಬೇಕು ಎಂಬ ನಮ್ಮ ಮನವಿಗೆ ಪೂರಕವಾಗಿ ಪ್ರತಿವಾದಿಗಳು ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಈ ನಿಟ್ಟಿನಲ್ಲಿ ಸಂಘದ ಬೈ–ಲಾಗೆ ತಿದ್ದುಪಡಿ ಮಾಡುವ ಮೂಲಕ ನಮ್ಮ ಮನವಿ ಪತ್ರ ಪರಿಗಣಿಸಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳ ಮೀಸಲು ಕಲ್ಪಿಸಲು ಪ್ರತಿವಾದಿಗಳಿಗೆ ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.