ಬೆಂಗಳೂರು: ಜೆ.ಜೆ.ನಗರದಲ್ಲಿ ಕೊಲೆಗೀಡಾದ ಚಂದ್ರು ಮನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದ ನಿಯೋಗ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ₹5 ಲಕ್ಷ ಪರಿಹಾರ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ, ‘ಚಂದ್ರು ಹತ್ಯೆ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು. ಹತ್ಯೆಗೀಡಾದ ಚಂದ್ರು ಅವರ ಸಹೋದರ ನವೀನ್ ನಮ್ಮ ಪಕ್ಷದ ಬೂತ್ ಸಮಿತಿ ಕಾರ್ಯದರ್ಶಿ. ಏಕಾಏಕಿ ಹತ್ಯೆ ನಡೆದಿದೆ. ಯಾರೂ ನೆರವಿಗೆ ಬರಲಿಲ್ಲ. ಇಲ್ಲಿ ಪೂರ್ವದ್ವೇಷ ಇರಲಿಲ್ಲ. ಬೈಕ್ ತಾಗಿದ್ದನ್ನೇ ನೆಪ ಮಾಡಿ, ಕನ್ನಡ ಮತ್ತು ತಮಿಳು ಮಾತ್ರ ಬರುವುದಾಗಿ ಹೇಳಿದ ಚಂದ್ರುವನ್ನು ಕೊಲೆ ಮಾಡಿದ್ದಾರೆ ಎಂದು ಅವರ ಮನೆಯವರೇ ಹೇಳಿದ್ದಾರೆ’ ಎಂದು ವಿವರಿಸಿದರು.
‘ಪೊಲೀಸ್ ಇಲಾಖೆಯವರು ಬಹಳಷ್ಟು ಸಾರಿ ವಾಸ್ತವಿಕ ಸಂಗತಿಗಳ ಕಡೆ ಹೋಗುವುದಕ್ಕಿಂತ ಈ ವಿಚಾರವನ್ನು ಇಲ್ಲಿಗೆ ತಣ್ಣಗೆ ಮಾಡಬೇಕು ಎಂದು ಯೋಚಿಸುತ್ತಾರೆ. ಅದು ತಪ್ಪೇನೂ ಅಲ್ಲ. ಇಂತಹ ಘಟನೆ ಮರುಕಳಿಸಬಾರದು. ಕನ್ನಡನಾಡಿನಲ್ಲಿ ಕನ್ನಡ ಮಾತನಾಡಲಿಲ್ಲ ಎಂದರೆ ಯೋಚಿಸಬೇಕಾದ ವಿಷಯ. ಸಣ್ಣ ಕಾರಣಕ್ಕೆ ಕೊಲೆ ಮಾಡಿದ್ದು ಖಂಡನೀಯ’ ಎಂದು ರವಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.