ADVERTISEMENT

ಪ್ರಾಧ್ಯಾಪಕ ಹುದ್ದೆಗೆ ಆಕ್ಷೇಪ: ಮೂವರಿಗೆ ಹೈಕೋರ್ಟ್ ದಂಡ

ಪಿಐಎಲ್‌ಗಳು ವೈಯಕ್ತಿಕ ಹಿತಾಸಕ್ತಿಗೆ ಜೋತು ಬೀಳದಿರಲಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:07 IST
Last Updated 11 ಏಪ್ರಿಲ್ 2025, 16:07 IST
<div class="paragraphs"><p>ಕೊಪ್ಪಳದ ವಕೀಲರಾದ ರವಿಚಂದ್ರ ಆರ್‌.ಮಾಟಲದಿನ್ನಿ ರಚಿಸಿರುವ, ‘ವಕೀಲರಿಗಾಗಿ ಇ–ಫೈಲಿಂಗ್‌ ಮಾರ್ಗಸೂಚಿ ಮತ್ತು ವಕೀಲರಿಗಾಗಿ ಕಂಪ್ಯೂಟರ್‌ ಬೇಸಿಕ್‌ ಕೈಪಿಡಿ’ಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯರೂರ್ (ಚಿತ್ರದಲ್ಲಿ ಬಲತುದಿ) ಅವರು, ರಾಜ್ಯ ವಕೀಲರ ಪರಿಷತ್‌ ಸಭಾಂಗಣದಲ್ಲಿ ಇತ್ತೀಚೆಗೆ ಲೋಕಾರ್ಪಣೆ ಮಾಡಿದರು.&nbsp;</p></div>

ಕೊಪ್ಪಳದ ವಕೀಲರಾದ ರವಿಚಂದ್ರ ಆರ್‌.ಮಾಟಲದಿನ್ನಿ ರಚಿಸಿರುವ, ‘ವಕೀಲರಿಗಾಗಿ ಇ–ಫೈಲಿಂಗ್‌ ಮಾರ್ಗಸೂಚಿ ಮತ್ತು ವಕೀಲರಿಗಾಗಿ ಕಂಪ್ಯೂಟರ್‌ ಬೇಸಿಕ್‌ ಕೈಪಿಡಿ’ಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯರೂರ್ (ಚಿತ್ರದಲ್ಲಿ ಬಲತುದಿ) ಅವರು, ರಾಜ್ಯ ವಕೀಲರ ಪರಿಷತ್‌ ಸಭಾಂಗಣದಲ್ಲಿ ಇತ್ತೀಚೆಗೆ ಲೋಕಾರ್ಪಣೆ ಮಾಡಿದರು. 

   

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎಂ.ಶಿವಶಂಕರ್ ಅವರನ್ನು ಅವರ ಹುದ್ದೆಯಿಂದ ತೆರವುಗೊಳಿಸಲು ಆದೇಶಿಸಬೇಕು’ ಎಂಬ ಕೋರಿಕೆಯನ್ನು ತಿರಸ್ಕರಿಸಿರುವ ಹೈಕೋರ್ಟ್‌, ಮೂವರು ಅರ್ಜಿದಾರರಿಗೆ ದಂಡ ವಿಧಿಸಿದೆ.

ಈ ಸಂಬಂಧ ಬೆಂಗಳೂರಿನ ಎಚ್.ಟಿ.ಉಮೇಶ್, ಮಂಡ್ಯ ಜಿಲ್ಲೆ ತೈಲೂರು ಗ್ರಾಮದ ಎಸ್.ಆನಂದ್ ಮತ್ತು ನಾಗರಭಾವಿಯ ಎಚ್.ಪಿ.ಪುಟ್ಟರಾಜು ಸಲ್ಲಿಸಿದ್ದ ಸಾರ್ವನಿಕ ಹಿತಾಸಕ್ತಿ ಅರ್ಜಿಯನ್ನು (ಕೊ-ವಾರಂಟೊ) ವಿಭಾಗೀಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ. 

ADVERTISEMENT

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠವು, ‘ಸೂಕ್ತ ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಅವರು ಇದ್ದ ಹುದ್ದೆಯಿಂದ ತೆಗೆದು ಹಾಕುವುದಕ್ಕಾಗಿ ಕೊ-ವಾರಂಟೊ ಅಡಿಯಲ್ಲಿ ಆದೇಶ ನೀಡಲು ಆಗದು’ ಎಂದು ಸ್ಪಷ್ಟಪಡಿಸಿದೆ.

‘ಈಗ ನೇಮಕಗೊಂಡಿರುವ ಹುದ್ದೆಗೆ ಶಿವಶಂಕರ್‌ ಅರ್ಹರಲ್ಲ’ ಎಂದು ಆಕ್ಷೇಪಿಸಿದ್ದ ಅರ್ಜಿದಾರರ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ನ್ಯಾಯಪೀಠ, ‘ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರ ವೃತ್ತಿ ಸ್ವರೂಪವನ್ನು ಸಾರ್ವಜನಿಕ ಹುದ್ದೆ ಎಂದು ಪರಿಗಣಿಸಲು ಆಗುವುದಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. 

‘ಅರ್ಜಿದಾರರು ವೈಯಕ್ತಿಕ ಹಾಗೂ ವೃತ್ತಿ ದ್ವೇಷದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಿದ್ದಾರೆ’ ಎಂಬ ಪ್ರತಿವಾದಿ ಶಿವಶಂಕರ್‌ ಪರ, ಹೈಕೋರ್ಟ್‌ ವಕೀಲ ಜಿ.ಲಕ್ಷ್ಮಿಕಾಂತ್ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ; ಮೂವರೂ ಅರ್ಜಿದಾರರಿಗೆ ತಲಾ ₹7,500 ದಂಡ ವಿಧಿಸಿದೆ.

‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್‌), ವೈಯಕ್ತಿಕ ಹಿತಾಸಕ್ತಿ ಅರ್ಜಿಗಳಾಗಬಾರದು’ ಎಂದು ಇದೇ ವೇಳೆ ಎಚ್ಚರಿಸಿರುವ ನ್ಯಾಯಪೀಠ, ‘ಅರ್ಜಿದಾರರು ದಂಡದ ಮೊತ್ತವನ್ನು ನಾಲ್ಕು ವಾರಗಳ ಒಳಗಾಗಿ, ‘ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ’ಕ್ಕೆ ಪಾವತಿ ಮಾಡಬೇಕು’ ಎಂದು ಆದೇಶಿಸಿದೆ.

ಒಟಿಸ್‌–ಮಧ್ಯಪ್ರವೇಶ ಇಲ್ಲ: ಹೈಕೋರ್ಟ್‌

‘ಸಾಲ ಪಾವತಿಗೆ ಏಕ ತೀರುವಳಿ ಯೋಜನೆ (ಒಟಿಎಸ್‌) ರೂಪಿಸುವ ಬ್ಯಾಂಕುಗಳ ಪ್ರಕ್ರಿಯೆಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ಈ ಸಂಬಂಧ ಕಲಬುರಗಿ ಶಾಖೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ್ದ ರಿಟ್‌ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ.ನಟರಾಜನ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ್‌ ಎ.ಪಾಟೀಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠ (ಕಲಬುರಗಿ), ‘ಸಾಲ ಒಪ್ಪಂದಕ್ಕೆ ಸಂಬಂಧಿಸಿದ ನಿಬಂಧನೆ ಹಾಗೂ ನಿಯಮಗಳನ್ನು ಮರು ರೂಪಿಸುವುದು ನ್ಯಾಯಾಲಯದ ಕೆಲಸವಲ್ಲ’ ಎಂದು ಹೇಳಿದೆ.

ಬಿಜನೂರು ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಇಂತಹ ಪ್ರಕರಣಗಳಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ಸಾಲ ಮರುಪಾವತಿ ನ್ಯಾಯಮಂಡಳಿ (ಡಿಆರ್‌ಟಿ) ಸೂಕ್ತ ಆದೇಶಗಳನ್ನು ಹೊರಡಿಸಬಹುದು’ ಎಂದು ಹೇಳಿದೆ.

ಸಮೀರ್‌ ವಿರುದ್ಧ ₹10 ಕೋಟಿ ಮಾನನಷ್ಟ ದಾವೆ

ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಗುರಿಯಾಗಿಸಿ ಸುದ್ದಿ ಬಿತ್ತರಿಸಿದ್ದ ಯೂ–ಟ್ಯೂಬರ್ ಎಂ.ಡಿ.ಸಮೀರ್ ವಿರುದ್ಧ ₹10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ವಿಡಿಯೊ ತೆಗೆದುಹಾಕುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಉಲ್ಲಂಘಿಸಿ ಎರಡನೇ ಬಾರಿಗೆ ವಿಡಿಯೊ ಮಾಡಿ ಹರಿಬಿಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಡಿ.ನಿಶ್ಚಲ ಹಾಗೂ ಡಿ.ಹರ್ಷೇಂದ್ರ ಕುಮಾರ್ ಸಲ್ಲಿಸಿರುವ ಅಸಲು ದಾವೆಯನ್ನು ಸಿಟಿ ಸಿವಿಲ್‌ ಕೋರ್ಟ್‌ ನ್ಯಾಯಾಧೀಶ ಎಸ್‌.ನಟರಾಜ್‌ ಶುಕ್ರವಾರ ಏಕಪಕ್ಷೀಯ ವಿಚಾರಣೆ ನಡೆಸಿದರು. ವಾದಿಗಳ ಪರ ಹೈಕೋರ್ಟ್‌ ವಕೀಲ ರಾಜಶೇಖರ ಹಿಲ್ಯಾರು ಅವರ ವಾದ ಆಲಿಸಿದ ನ್ಯಾಯಾಧೀಶರು ಪ್ರತಿವಾದಿ ಸಮೀರ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದ್ದಾರೆ.

ಬೈಜೂಸ್‌ ಕಂಪನಿ ವಿವಾದ: ಮಧ್ಯಂತರ ಆದೇಶ 

‘ಮೆಸರ್ಸ್‌ ಥಿಂಕ್‌ ಅಂಡ್‌ ಲರ್ನ್‌ ಪ್ರೈವೆಟ್‌ ಲಿಮಿಟೆಡ್‌’ (ಟಿಎಲ್‌ಪಿಎಲ್‌) ಕಂಪನಿಯಿಂದ ಅಮಾನತುಗೊಂಡಿರುವ ನಿರ್ದೇಶಕ ಬೈಜು ರವೀಂದ್ರನ್‌ ಅವರು ಕಂಪನಿಯ ಜೊತೆ ಈ ಮೊದಲು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ನಡೆಸಿರುವ ಸಂವಹನದ ಸಾಕ್ಷ್ಯ ಎನಿಸಿರುವ ಯಾವುದೇ ಇ–ಮೇಲ್‌ಗಳನ್ನು ತೆಗೆದು ಹಾಕಬಾರದು’ ಎಂದು ಕಂಪನಿಯ ನೂತನ ರೆಸಲ್ಯೂಷನ್‌ ಪ್ರೊಫೆಷನಲ್‌ (ಆರ್‌ಪಿ) ಶೈಲೇಂದ್ರ ಅ‌ಜ್ಮೇರಾ ಅವರಿಗೆ ಹೈಕೋರ್ಟ್‌ ನಿರ್ದೇಶಿಸಿದೆ. ಈ ಕುರಿತಂತೆ ರವೀಂದ್ರನ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ರಜಾ ದಿನದಲ್ಲಿ ನೇಮಕಗೊಂಡಿದ್ದ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಶುಕ್ರವಾರ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅರ್ಜಿದಾರ ರವೀಂದ್ರನ್‌ ಪರ ಸುಪ್ರೀಂ ಕೋರ್ಟ್‌ ವಕೀಲ ಶ್ಯಾಮ್‌ ಮೋಹನ್‌ ವಾದ ಆಲಿಸಿದ ನ್ಯಾಯಪೀಠ ‘ಅರ್ಜಿದಾರರು ಈ ಮೊದಲು ಕಂಪನಿಯ ಜೊತೆಗೆ ನಡೆಸಿರುವ ಸಂವಹನದ ಇ–ಮೇಲ್‌ಗಳನ್ನು ಸುರಕ್ಷಿತವಾಗಿ ಕಾಪಿಡಬೇಕು’ ಎಂದು ಪ್ರತಿವಾದಿ ಆರ್‌ಪಿಗೆ ನಿರ್ದೇಶಿಸುವ ಮೂಲಕ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದರು. ಪ್ರತಿವಾದಿ ಮೆಸರ್ಸ್‌ ಜಿಎಲ್‌ಎಎಸ್‌ ಟ್ರಸ್ಟ್‌ ಕಂಪನಿ ಪರ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಹಾಗೂ ರಾಜ್ಯ ಪ್ರಾಸಿಕ್ಯೂಷನ್‌ ಪರ ರಾಹುಲ್ ಕಾರ್ಯಪ್ಪ ಹಾಜರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.