ಬೆಂಗಳೂರು: ಬೀದರ್ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 398 ಬೋಧಕರ ಮತ್ತು 1073 ಬೋಧಕೇತರ ಹುದ್ದೆಗಳು ಖಾಲಿ ಉಳಿದಿವೆ.
ವಿಧಾನಪರಿಷತ್ನಲ್ಲಿ ಬುಧವಾರ ಕಾಂಗ್ರೆಸ್ನ ಅರವಿಂದ ಕುಮಾರ್ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು, ’305 ಬೋಧಕರ ಮತ್ತು 188 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ’ ಎಂದು ತಿಳಿಸಿದರು.
‘ಈಗಾಗಲೇ 132 ಸಹಾಯಕ ಪ್ರಾಧ್ಯಾಪಕರನ್ನು ಗುತ್ತಿಗೆ ಆಧಾರದ ಮೇಲೆ ಮತ್ತು 34 ಸಹಾಯಕ ಪ್ರಾಧ್ಯಾಪಕರನ್ನು ಪಶುವೈದ್ಯ ಸೇವಾ ಇಲಾಖೆಯಿಂದ ನಿಯೋಜಿಸಲಾಗಿದೆ. ಬೋಧಕೇತರ ಹುದ್ದೆಗಳಿಗೆ 52 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ’ಎಂದು ವಿವರಿಸಿದರು.
ಸಚಿವರ ಉತ್ತರಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಅರವಿಂದ ಕುಮಾರ್ ಅರಳಿ, ‘ಬಿಜೆಪಿ ಸರ್ಕಾರ ಗೋಮಾತೆ ರಕ್ಷಣೆ ಬಗ್ಗೆ ಪದೇ ಪದೇ ಹೇಳುತ್ತದೆ. ಆದರೆ, ಗೋಮಾತೆ ರಕ್ಷಣೆಗೆ ಅಗತ್ಯ ಇರುವ ಉತ್ತಮ ಪಶುವೈದ್ಯಾಧಿಕಾರಿಗಳನ್ನು ರೂಪಿಸಲು ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ವಿಶ್ವವಿದ್ಯಾಲಯ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯವಹಿಸಿದೆ. ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸುವ ಹುನ್ನಾರ ನಡೆದಿದೆ. ಇದು ಯಾವ ರೀತಿಯ ಅಭಿವೃದ್ಧಿ’ ಎಂದರು.
ಮಧ್ಯಪ್ರವೇಶಿಸಿದ ಕಂದಾಯ ಸಚಿವ ಅಶೋಕ, ‘ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದಿಲ್ಲ. ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆ ಜತೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.